ADVERTISEMENT

ಜನಗಣತಿ ಕಾರ್ಯ ಸುಸೂತ್ರವಾಗಿ ನಿರ್ವಹಿಸಿ

ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 15:44 IST
Last Updated 27 ಫೆಬ್ರುವರಿ 2020, 15:44 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜನಗಣತಿಗೆ ನಿಯೋಜಿತ ಅಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಉದ್ಘಾಟಿಸಿದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜನಗಣತಿಗೆ ನಿಯೋಜಿತ ಅಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಉದ್ಘಾಟಿಸಿದರು   

ರಾಯಚೂರು: ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯವನ್ನು ಯಾವುದೇ ಸಮಸ್ಯೆ ಬಾರದಂತೆ ಸುಸೂತ್ರವಾಗಿ ನಿರ್ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 2021 ರ ಜನಗಣತಿಯ ನಿಯೋಜಿತ ಅಧಿಕಾರಿಗಳು, ಸಹಾಯಕ ನಿಯೋಜಿತ ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯಕರಿಗೆ ಗುರುವಾರ ಏರ್ಪಡಿಸಿದ್ದ ಜನಗಣತಿ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಸಕ್ತಿಯಿಂದ ತರಬೇತಿಯಲ್ಲಿ ನೀಡುವ ಎಲ್ಲಾ ಅಂಶಗಳನ್ನು ಮನನ ಮಾಡಿಕೊಳ್ಳಬೇಕು. ರಾಜ್ಯ ಮಟ್ಟದಲ್ಲಿ ನಿಗಧಿಪಡಿಸಿದ ವೇಳಪಟ್ಟಿಯಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಜನಗಣತಿ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು, ಅವುಗಳನ್ನು ಮೆಟ್ಟಿನಿಲ್ಲಲು ಈ ತರಬೇತಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿದಾರರು ತಿಳಿಸುವ ಎಲ್ಲಾ ಅಂಶಗಳನ್ನು ಉತ್ತಮವಾಗಿ ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಜನಗಣತಿ ಕೈಗೊಳ್ಳುವ ಕುರಿತು ನೀಡಲಾಗಿರುವ ಮೂರು ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿಕೊಳ್ಳಬೇಕು. ಚಾರ್ಜ್ ಅಧಿಕಾರಿಗಳು ಪುಸ್ತಕದ ಸಂಪೂರ್ಣ ವಿವರಗಳನ್ನು ಅರಿತುಕೊಳ್ಳಬೇಕು. ಮನೆಗೆ ಭೇಟಿ ವೇಳೆ ಹೇಗೆ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನು ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ಮನೆಪಟ್ಟಿ ಹಾಗೂ ಮೊಬೈಲ್ ಆಪ್‌ಗಳ ಮೂಲಕ ಹೇಗೆ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನು ತಿಳಿಸಿಕೊಡಲಾಗುವುದು ಎಂದರು.

ಜನಗಣತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ನಗರ ಪ್ರದೇಶಗಳಲ್ಲಿ ಅದರ ಸಭೆ ಪಟ್ಟಣ ಪಂಚಾಯತಿಗಳು ಹಾಗೂ ಗ್ರಾಮೀಣ ಮಟ್ಟದಲ್ಲಿ ತಹಶೀಲ್ದಾರರು ಜನಗಣತಿಗೆ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ತರಬೇತಿಯಲ್ಲಿ ತಿಳಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜನಗಣತಿ ಕುರಿತು ಜಾಗೃತಿ ಮೂಡಿಸಬೇಕು. ಅಲ್ಲದೇ ಜನಗಣತಿದಾರರನ್ನು ನೇಮಕವಾಗುವುದು ಅವರ ಇಲಾಖೆಯಿಂದಲೇ ಎನ್‌ಐಸಿಯಿಂದ ಜನಗಣತಿ ಮಾಹಿತಿಯನ್ನು ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.

ತರಬೇತಿಗೆ ಬಂದಿರುವವರು ಕಡ್ಡಾಯವಾಗಿ ಜನಗಣತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ತಿಳಿದುಕೊಳ್ಳಬೇಕು. ಯಾವುದೇ ಅನುಮಾನ ಇಟ್ಟುಕೊಂಡು ಹಿಂದಿರುಗಬಾರದು ಜನಗಣತಿ ಕಾರ್ಯ ಜಿಲ್ಲೆಯಲ್ಲಿ ಉತ್ತಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಬೇಕಾಗಿದೆ. ಇದಕ್ಕಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಿಸಿದ ಇಲಾಖೆಗಳು ಅದಕ್ಕೆಂದೇ ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಶಾಖೆಯನ್ನು ತೆರೆಯುವಂತೆ ಈಗಾಗಲೇ ಹಲವು ಬಾರಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಜನಗಣತಿ ಕಾರ್ಯದ ಹೆಚ್ಚುವರಿ ನಿಯೋಜಿತ ಅಧಿಕಾರಿ ರಾಜಶೇಖರ್ ಡಂಬಳ, ಎನ್‌ಐಸಿ ಅಧಿಕಾರಿ ರವಿಶಂಕರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜನಗಣತಿ ತರಬೇತಿದಾರ ಹಾಗೂ ರಾಯಚೂರು ನೋಡಲ್ ಅಧಿಕಾರಿ ಮುರಾರಿ ಸತ್ಯಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್. ಗೋನಾಳ್, ಅಧಿಕಾರಿಗಳಾದ ಟಿ.ಕೆ. ಶ್ರೀಧರ್ ಇದ್ದರು.

ವಿದ್ಯಾರ್ಥಿ ಶಿವಾನಂದ ಪ್ರಾರ್ಥಿಸಿದರು. ಜಿಲ್ಲಾ ಜನಸಂಖ್ಯೆ ತರಬೇತಿ ಅಧಿಕಾರಿ ಸದಾಶಿವಪ್ಪ ಸ್ವಾತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.