ರಾಯಚೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ಪಡೆಯುವ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿದ್ದು, ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಸರ್ವಜನ ಪರ ಸಂಘದ ನೇತೃತ್ವದಲ್ಲಿ ಪಾಲಕರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಶಾಲಾ– ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಇದರಿಂದ ಶಿಕ್ಷಣ ಪಡೆಯುವುದು ಬಡವರಿಗೆ ಗಗನ ಕುಸುಮವಾಗಿದೆ. ಎಲ್ಕೆಜಿ, ಯುಕೆಜಿ ತರಗತಿಗಳಿಗೂ ₹ 15 ಸಾವಿರ ಶುಲ್ಕ ಪಡೆಯಲಾಗುತ್ತಿದ್ದು, ಇಷ್ಟೊಂದು ಹಣ ಪಡೆಯುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಪಿಯುಸಿ ಪ್ರವೇಶಕ್ಕೆ ಕೆಲ ಖಾಸಗಿ ಕಾಲೇಜು ₹45 ಸಾವಿರ ಶುಲ್ಕ ನಿಗದಿ ಪಡಿಸಿವೆ. ಕೆಲವೊಂದು ಶಾಲೆಯಲ್ಲಿ ಶಾಲೆಯವರು ಸೂಚಿಸಿದ ಅಂಗಡಿಯಲ್ಲಿಯೇ ಸಮವಸ್ತ್ರ, ಪಠ್ಯಪುಸ್ತಕ ಖರೀದಿಸಬೇಕಾದ ಪರಿಸ್ಥಿತಿಯಿದೆ. ಇದರಲ್ಲಿಯೂ ಕಮಿಷನ್ ಪಡೆಯುವ ಅನುಮಾನವಿದೆ. ಶಿಕ್ಷಣ ಸೇವಾ ಮನೋಭಾವದಿಂದ ಕೂಡಿರಬೇಕು. ಆದರೆ, ವ್ಯಾಪಾರೀಕರಣವಾಗಿದೆ ಎಂದು ದೂರಿದರು.
ಕಡಿಮೆ ಶುಲ್ಕ ಪಡೆಯುವಂತೆ ಖಾಸಗಿ ಶಾಲಾ– ಕಾಲೇಜುಗಳಿಗೆ ಆದೇಶ ಹೊರಡಿಸಬೇಕು. ಶಿಕ್ಷಣ ವ್ಯಾಪಾರೀಕರಣವನ್ನು ತಡೆಗಟ್ಟಲು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪೋಷಕರೊಂದಿಗೆ ಹೋರಾಟ ಮಾಡಲಾಗುತ್ತದೆ ಎಂದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಎ.ವಿಜಯರಾಜ, ಉಪಾಧ್ಯಕ್ಷ ಪಿ.ಪ್ರಕಾಶ, ಪ್ರಧಾನ ಕಾರ್ಯದರ್ಶಿ ಬೋಳಬಂಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.