ರಾಯಚೂರು: ರೈಲ್ವೆಇಲಾಖೆಯನ್ನು ಖಾಸಗಿಕರಣಗೊಳಿಸುವ ತೀರ್ಮಾನ ಕೈಬಿಡಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಪದಾಧಿಕಾರಿಗಳು ಸ್ಥಳೀಯ ರೈಲ್ವೆ ಇಲಾಖೆ ಅಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರೈಲ್ವೆ ಇಲಾಖೆ ಸರ್ಕಾರದ ಉದ್ಯಮವಾಗಿದೆ. ಸಾಮಾನ್ಯರು ಕೂಡ ಅತಿ ಕಡಿಮೆ ದರದಲ್ಲಿ ದೂರದ ಪ್ರದೇಶಗಳಿಗೆ ಪ್ರವಾಸ ಮಾಡಲು ಸಹಕಾರಿಯಾಗಿದೆ. ಬಡವರು, ಮಧ್ಯಮ ವರ್ಗದವರೂ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಲು ರೈಲುಗಳ ಮೇಲೆ ಅವಲಂಬನೆಯಾಗಿದ್ದಾರೆ.ಇದು ಖಾಸಗಿ ಕಾರಣವಾದರೆ ವಿಕಲಚೇತನರು, ಹಿರಿಯನಾಗರಿಕರು ರಿಯಾಯಿತಿಯಿಂದ ವಂಚಿತರಾಗುತ್ತಾರೆ. ರೈಲ್ವೆ ಇಲಾಖೆ ಸಂಬಂಧಿಸಿದ ಕೋಚ್, ಹಳಿ, ಗಾಲಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಖಾಸಗಿ ಕಂಪನಿಗಳಲ್ಲಿ ಗುಲಾಮರಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಇಲಾಖೆಯಲ್ಲಿ ಇದುವರೆಗೂ ನೀಡುತ್ತಿದ್ದ ಮೀಸಲಾತಿಯಿಂದ ಮಹಿಳೆಯರ, ಅಂಗವಿಕಲರಿಗೆ ಕ್ರೀಡಾಪಟುಗಳಿಗೆ ಸೌಲಭ್ಯ ಇಲ್ಲದಂತಾಗುತ್ತದೆ. ರೈಲ್ವೆ ಪ್ರಯಾಣಿಕರ ಸೌಲಭ್ಯಕ್ಕಾಗಿ ಮೀಸಲಿರುವ ಸ್ಥಳಗಳು ರಿಯಲ್ ಎಸ್ಟೇಟ್ ದಂಧೆಕೋರರಿಗೆ ವರವಾಗುತ್ತವೆ ಎಂದು ದೂರಿದರು.
ಇಲಾಖೆಯಿಂದ ಸರ್ಕಾರಕ್ಕೆ ಲಾಭದಾಯಕವಾಗಿದೆ. ದೇಶದ ಜನರ ಪ್ರಯಾಣಕ್ಕೆ ಅನುಕೂಲವಾಗಿದೆ. ಇದು ಅತಿದೊಡ್ಡ ಇಲಾಖೆಯೂ ಆಗಿದೆ. ಇದನ್ನು ಕೇವಲ ಒಂದು ಉದ್ಯಮ ಎಂದು ನೋಡದೆ ಅದೊಂದು ಸೇವಾ ಸಂಸ್ಥೆ ಎಂದು ಪರಿಗಣಿಸಬೇಕು. ಕೂಡಲೇ ಸರ್ಕಾರ ಖಾಸಗಿಕರಣ ಪ್ರಸ್ತಾವವನ್ನು ಕೈಬೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಎಚ್. ಪದ್ಮ, ಕೆ.ಜಿ. ವೀರೇಶ್, ಡಿ.ಎಸ್ ಶರಣಬಸವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.