ರಾಯಚೂರು: ಗಾಂಧೀ ಜಯಂತಿಯ ಅಂಗವಾಗಿ ಮದ್ಯ ಮಾರಾಟ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ಮದ್ಯಪಾನ ನಿಷೇಧ ಆಂದೋಲನ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಕ್ರೀಡಾಂಗಣ ಬಳಿಯ ಮಹಾತ್ಮಾಗಾಂಧಿ ಪುತ್ಥಳಿ ಬಳಿ ಶನಿವಾರ ಧರಣಿ ನಡೆಸಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಹೈಕೋರ್ಟ್ ಆದೇಶದ ಪ್ರಕಾರ ಅಕ್ರಮ ಮದ್ಯ ಮಾರಾಟವನ್ನು ಗುರುತಿಸಿ ಸಂಪೂರ್ಣ ನಿಷೇಧ ಮಾಡಬೇಕು ಎಂದು ಸೂಚನೆ ನೀಡಿದರೂ ಜಿಲ್ಲೆಯಲ್ಲಿನ ಅಕ್ರಮ ಮದ್ಯ ಮಾರಾಟಕ್ಕೆ ನಿಷೇಧವಾಗಿಲ್ಲ. ಹೈಕೋರ್ಟ್ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ಸೇವನೆಯಿಂದ ಆಗುವ ಅಪಾಯ, ಅನಾಹುತಗಳ ಬಗ್ಗೆ ಸರ್ಕಾರ ಒಂದು ಕಡೆ ಜಾಗೃತಿ ಮೂಡಿಸಿದರೆ ಮತ್ತೊದೆಡೆ ಸರ್ಕಾರವೇ ಮದ್ಯ ಮಾರಾಟಕ್ಕೆ ಪ್ರೇರೇಪಿಸುತ್ತಿದೆ. ಮದ್ಯ ಸೇವನೆಯಿಂದ ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಸಂಪೂರ್ಣ ಮದ್ಯ ನಿಷೇಧ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಮದ್ಯ ನಿಷೇಧ ಹೋರಾಟ ಸಮಿತಿಯ ಸಂಚಾಲಕಿ ವಿದ್ಯಾ ಪಾಟೀಲ, ಅಭಯಕುಮಾರ, ಮೋಕ್ಷಮ್ಮ, ಮಹಾಲಕ್ಷ್ಮೀ, ಬಸವರಾಜ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.