ರಾಯಚೂರು: ಕಾರ್ಮಿಕ, ರೈತ, ಶಿಕ್ಷಣ ವಿರೋಧಿ ನೀತಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಕಾರ್ಮಿಕ ಸಂಘಗಳ ಸಂಟಿ ಸಮಿತಿ (ಜೆಸಿಟಿಯು) ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್ಸಿಸಿ) ವಿದ್ಯಾರ್ಥಿ,ಯುವಜನ,ದಲಿತರ ಹಾಗೂ ಮಹಿಳಾ ಸಂಘಟನೆಗಳ ಜಂಟಿ ವೇದಿಕೆಯ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. ಕೋವಿಡ್ –19 ಪಿಡುಗು ದೇಶದಲ್ಲಿ ಹಿಂದೆಂದು ಕಂಡಿರದಂತೆ ಕಾರ್ಮಿಕ, ಮಧ್ಯಮ ವರ್ಗದವರಿಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ನಿರುದ್ಯೋಗದ ಪ್ರಮಾಣ ಶೇ 30ರಷ್ಟು ಏರಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಕಾರ್ಪೋರೇಟ್ ಪರ ನೀತಿ ರೂಪಿಸಿ ವಕ್ತಾರದಂತೆ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆಗಳಿಗೆ ಮಾದರಿ ಸ್ಥಾಯಿ ಆದೇಶಗಳಲ್ಲಿ ನಿಗಧಿತ ಅವಧಿ ಕೆಲಸ ಅಳವಡಿಸಲು ತರಲಾಗಿರುವ ಪ್ರಗತಿ ವಿರೋಧಿ ತಿದ್ದುಪಡಿಗಳು ಹಾಗೂ ವ್ಯತ್ಯಸ್ಥ ತುಟ್ಟಿಭತ್ಯೆ ಮುಂದೂಡಿಕೆಯ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನ ಒಂದಕ್ಕೆ ₹600 ಕೂಲಿ ನೀಡಬೇಕು. 200 ದಿನಗಳ ಕೆಲಸಗಳಿಗಾಗಿ ನಗರ ಪ್ರದೇಶಗಳಿಗೆ ಉದ್ಯೋಗಖಾತ್ರಿ ಯೋಜನೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಎಚ್.ಪದ್ಮ, ವರಲಕ್ಷ್ಮಿ, ಎನ್.ಎಸ್ ವೀರೇಶ, ಸೂಗಯ್ಯ, ಆರ್.ಎಸ್ ಮಠ, ಕೆ.ಜಿ ವೀರೇಶ, ಡಿ. ಎಸ್. ಶರಣಬಸವ, ಕರಿಯಪ್ಪ ಹಚ್ಚೋಳ್ಳಿ, ಆಂಜನೇಯ ಕುರುಬದೊಡ್ಡಿ, ಮಾರೆಪ್ಪ ಅರವಿ, ಮಲ್ಲಿಕಾರ್ಜುನ ರೆಡ್ಡಿ ದಿನ್ನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.