ರಾಯಚೂರು: ನಗರದ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಯಲ್ಲಿ ಕಾರ್ಡಿಯಾಲಾಜಿಮತ್ತು ಯುರಾಲಾಜಿ ವಿಭಾಗ ಪ್ರಾರಂಭ ಮಾಡಬೇಕು ಎನ್ನುವುದು ಸೇರಿ ಜಿಲ್ಲೆಗೆ ವಿವಿಧ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರದ ಡಿ.ಎನ್.ಬಿ. ಅನುಮತಿ ಮೇರೆಗೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ( ರಿಮ್ಸ್) ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ (ಓಪೆಕ್) ಆಸ್ಪತ್ರೆಯಲ್ಲಿ ಡಿಎನ್ಬಿ ವಿಭಾಗದಡಿ ಕಾರ್ಡಿಯಾಲಜಿ ಹಾಗೂ ಯುರಾಲಾಜಿ ಪ್ರಾರಂಭಿಸುವುದು ಅವಶ್ಯವಿದೆ. ಇದರಿಂದ ಈ ಭಾಗದ ಜನರಿಗೂ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
ಎಂಡಿಗಳ ನಿಯೋಜನೆ ಮಾಡಿ
ಇಲ್ಲಿನ ನವೋದಯ ವೈದ್ಯಕೀಯ ಕಾಲೇಜಿನ ಎಂ.ಡಿ ವಿದ್ಯಾರ್ಥಿಗಳು ಕೋರ್ಸ್ ಮುಗಿದ ನಂತರ ಬೆಂಗಳೂರು ಹಾಗೂ ಇತರೆ ಮಹಾನಗರಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೇವೆಗೆ ನಿಯೋಜನೆ ಮಾಡಲಾಗುತ್ತಿದೆ, ಇವರನ್ನು ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ( ಓಪೆಕ್) ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಯಲ್ಲಿ ನಿಯೋಜನೆ ಮಾಡಬೇಕು. ಇದರಿಂದ ಈ ಭಾಗದ ರೋಗಿಗಳಿಗೆ ಅನುಕೂಲವಾಗಲಿದೆ. ಈ ಕುರಿತು ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ವೇತನ ಪರಿಷ್ಕರಿಸಿ
ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟೈಫಂಡರಿ ಶೂಶ್ರೂಷಕರಿಗೆ ಸರ್ಕಾರದ ಆದೇಶದ ಪ್ರಕಾರ ಪರಿಷ್ಕೃತ ಮೂಲ ವೇತನ ನೀಡುತ್ತಿಲ್ಲ. ರಿಮ್ಸ್ ಮೆರಿಟ್ ಕಮ್ ರೋಸ್ಟರ್ ಪ್ರಕಾರ 371 (ಜೆ) ಮೀಸಲಾತಿ ಅಡಿಯಲ್ಲಿ 29 ಜನ ಸೇವೆ ಸೇರಿ ಐದು ವರ್ಷಗಳಿಂದಲೂ ಕೇವಲ ₹12 ಸಾವಿರ ವೇತನ ಪಡೆದು ಸ್ಟೈಫಂಡರಿ ಆಧಾರದಲ್ಲಿ ಶೂಶ್ರೂಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 26–6–2019ರ ಸರ್ಕಾರದ ಆದೇಶದಂತೆ ಇವರಿಗೆ ವೇತನ ಶ್ರೇಣಿ ಶೇ 85– ₹100 ಕಡಿತಗೊಳಿಸಿದ ದರ ಹಾಗೂ ಪರಿಷ್ಕೃತ ಮೂಲ ವೇತನ ಪಾವತಿ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.