ADVERTISEMENT

ರೈತ ಬೆಳೆದ ಹಣ್ಣು ತರಕಾರಿ ಶೇ 30 ರಷ್ಟು ವ್ಯರ್ಥ

ಜಿಲ್ಲಾ ಕೈಗಾರಿಕೆ ಜಂಟಿ ಉಪ ನಿರ್ದೇಶಕ ಮಹ್ಮದ್ ಇರ್ಫಾನ್ ಕಳವಳ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:37 IST
Last Updated 19 ನವೆಂಬರ್ 2019, 12:37 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ’ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ’ ಮಂಗಳವಾರ ಆಯೋಜಿಸಿದ್ದ ತಾಂತ್ರಿಕ ಕೌಶಲ್ಯಗಳ ಕುರಿತ ಕಾರ್ಯಾಗಾರವನ್ನು ಜಿಲ್ಲಾ ಕೈಗಾರಿಕೆ ಜಂಟಿ ಉಪ ನಿರ್ದೇಶಕ ಮಹ್ಮದ್ ಇರ್ಫಾನ್ ಉದ್ಘಾಟಿಸಿ ಮಾತನಾಡಿದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ’ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ’ ಮಂಗಳವಾರ ಆಯೋಜಿಸಿದ್ದ ತಾಂತ್ರಿಕ ಕೌಶಲ್ಯಗಳ ಕುರಿತ ಕಾರ್ಯಾಗಾರವನ್ನು ಜಿಲ್ಲಾ ಕೈಗಾರಿಕೆ ಜಂಟಿ ಉಪ ನಿರ್ದೇಶಕ ಮಹ್ಮದ್ ಇರ್ಫಾನ್ ಉದ್ಘಾಟಿಸಿ ಮಾತನಾಡಿದರು   

ರಾಯಚೂರು: ಪ್ರಪಂಚದಲ್ಲಿಯೇ ಭಾರತವು ಹಣ್ಣು ಮತ್ತು ತರಕಾರಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದ್ದು ಶೇ 30 ರಷ್ಟು ವ್ಯರ್ಥ ಆಗುತ್ತಿವೆ ಎಂದು ಜಿಲ್ಲಾ ಕೈಗಾರಿಕೆ ಜಂಟಿ ಉಪ ನಿರ್ದೇಶಕ ಮಹ್ಮದ್ ಇರ್ಫಾನ್ ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೈಸೂರಿನ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ’ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ’ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಹಾಗೂ ತಾಂತ್ರಿಕ ಕೌಶಲ್ಯಗಳ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆಹಾರ ಉತ್ಪನ್ನಗಳಿಗೆ ಯಾವಾಗಲೂ ಬೇಡಿಕೆ ಇದ್ದೆ ಇದೆ. ಆದರೆ, ರೈತರು ಬೆಳೆದ ಹಣ್ಣುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದಕ್ಕೆ ಸಾಧ್ಯವಾಗದೆ ಶೇ 30 ರಷ್ಟು ವ್ಯರ್ಥವಾಗುತ್ತಿವೆ. ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಹಲವು ದಿನಗಳು ಕಳೆದರೂ ಹಣ್ಣುಗಳು ಕೊಳೆಯದಂತೆ ಒಣಗಿಸಿ, ಶೇಖರಿಸಿ ಇಡುವ ವಿಧಾನಗಳನ್ನು ಮತ್ತು ಆಹಾರ ಪದಾರ್ಥಗಳು ತಯಾರಿಸುವ ಕುರಿತು ಮೈಸೂರಿನ ಕೇಂದ್ರ ಆಹಾರ ಮತ್ತು ಸಂಶೋಧನಾ ಸಂಸ್ಥೆ ಸ್ವ–ಸಹಾಯ ಗುಂಪುಗಳಿಗೆ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು.

ಯುವ ಉದ್ಯಮಿಗಳು ಆಹಾರ ಪದಾರ್ಥಗಳಾದ ಮಸಾಲೆ ಪದಾರ್ಥ, ಹಣ್ಣಿನ ಜಾಮ್, ಉಪ್ಪಿನ ಕಾಯಿ, ಚಟ್ನಿ ತಯಾರಿಕೆಯಲ್ಲಿ ತರಬೇತಿ ಪಡೆದು ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಅಧಿಕ ಲಾಭ ಗಳಿಸಬಹುದು ಎಂದರು.

ADVERTISEMENT

ಮೈಸೂರಿನ ಸಿಎಸ್‌ಈಆರ್ ಸಂಸ್ಥೆಯ ಮಹಿಳಾ ಸಬಲೀಕರಣ ಕಾರ್ಯಯೋಜನೆ ಅಧಿಕಾರಿ ಡಾ.ಗಿರಿಯಪ್ಪ ಕೊಳ್ಳನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಮಹಿಳಾ ಸಬಲೀಕರಣದಲ್ಲಿ ಹಿಂದುಳಿದ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ತರಬೇತಿಗಾಗಿಕೇಂದ್ರ ಆಹಾರ ಸಂಶೋಧನಾಲಯ ಸಂಸ್ಥೆಯು ಈ ಜಿಲ್ಲೆಗಳನ್ನು ಮಾಡಿದೆ ಎಂದು ತಿಳಿಸಿದರು.

ಜಿಲ್ಲೆಯ ಕೌಶಲ್ಯ ಕೇಂದ್ರದ ಕೈಗಾರಿಕಾ ಅಧಿಕಾರಿ ರಾಜೇಶ್ ಬಾವಳಿಗಿ ಮಾತನಾಡಿ, ಉತ್ಪನ್ನ ತಯಾರಿಕೆ, ಉದ್ಯಮದ ಆರಂಭ, ಬ್ಯಾಂಕ್ ಗಳಿಂದ ಸಾಲ ಪಡೆಯುವುದು, ಉತ್ಪನ್ನದ ಮಾರುಕಟ್ಟೆ ಪ್ರವೇಶ ಮತ್ತು ಪ್ರಚಾರ ಕುರಿತುಹೇಳಿದರು.

ಜಿಲ್ಲಾ ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ವೀರನಗೌಡರ್‌, ಡಾ.ಮಾಧವ ನಾಯಕ, ವಿಜಯಲಕ್ಷ್ಮೀ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ರೈತ ಸ್ವಾಭಿಮಾನಿ ಸಂಘದ ಸಿಬ್ಬಂದಿ, ತರಬೇತಿ ಪಡೆದ ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.