ADVERTISEMENT

ರಾಯಚೂರು | ಕುಡಿಯುವ ನೀರಿಗಾಗಿ ನಿತ್ಯ ಪರದಾಟ

ಕೂಡ್ಲೂರು ಗ್ರಾಮದಿಂದ ನೀರು ತರುತ್ತಿರುವ ಶಾಖವಾದಿ ಗ್ರಾಮಸ್ಥರು

ಉಮಾಪತಿ ಬಿ.ರಾಮೋಜಿ
Published 17 ಏಪ್ರಿಲ್ 2020, 3:05 IST
Last Updated 17 ಏಪ್ರಿಲ್ 2020, 3:05 IST
ಶಕ್ತಿನಗರದ ಬಳಿಯ ಶಾಖವಾದಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ, ಖಾಲಿ ಕೊಡಗಳನ್ನು ಹಿಡಿದುಕೊಂಡು ಪಕ್ಕದ ಊರಿಗೆ ಹೋಗುತ್ತಿರುವ ಗ್ರಾಮಸ್ಥರು
ಶಕ್ತಿನಗರದ ಬಳಿಯ ಶಾಖವಾದಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ, ಖಾಲಿ ಕೊಡಗಳನ್ನು ಹಿಡಿದುಕೊಂಡು ಪಕ್ಕದ ಊರಿಗೆ ಹೋಗುತ್ತಿರುವ ಗ್ರಾಮಸ್ಥರು   

ಶಕ್ತಿನಗರ: ಶುದ್ಧ ಕುಡಿಯುವ ನೀರಿಗಾಗಿ ನಿತ್ಯ 4 ಕಿಲೋ ಮೀಟರ್‌ವರೆಗೆ ನಡೆದು ಕೊಂಡು ಹೋಗಬೇಕು. ದೂರದ ಊರುಗಳಿಗೆ ತೆರಳಿ ನೀರು ತರಲು ತ್ರಾಸ್ ಆಗುತ್ತದೆ. ಬೋರವೆಲ್‌ ಪಂಪ್‌ಸೆಟ್‌ನಿಂದ ಬೆಳಿಗ್ಗೆ ಒಂದು ತಾಸು ನೀರು ಬಿಡುತ್ತಾರೆ. ಅಷ್ಟರೊಳಗೆ ಜನರು ನೀರು ಹಿಡಿದು ಕೊಳ್ಳಬೇಕು ಎಂದು ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಶಾಖವಾದಿ ಗ್ರಾಮದ ಗ್ರಾಮಸ್ಥರು ನೀರಿನ ಸಮಸ್ಯೆ ಹೇಳಿದರು.

ಅಡುಗೆ, ಸ್ನಾನದ ನೀರಿಗಾಗಿ ಏನು ಮಾಡುತ್ತೀರಿ? ಎಂದಾಗ, ಗ್ರಾಮದಿಂದ ನಾಲ್ಕು ಕಿ.ಮೀ.ಅಂತರದಲ್ಲಿ ಇರುವ ಕೂಡ್ಲೂರು ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಇದೆ. ಅಲ್ಲಿಂದಲೆ ನೀರನ್ನು ಹೊತ್ತು ತರಬೇಕಿದೆ. ವೃದ್ಧರು ಮತ್ತು ಅಂಗವಿಕಲರು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿತ್ಯ ಕಂಡು ಬರುತ್ತಿದೆ.

ಮನೆಯಲ್ಲಿ ಗಂಡು ಮಕ್ಕಳು ಇದ್ದರೆ, ಬೈಕ್‌ ಮೂಲಕ ನೀರು ತರುತ್ತಾರೆ. ಅವರು ಇಲ್ಲದಿದ್ದರೆ, ಮನೆಯಲ್ಲಿರುವ ಅರ್ಧದಷ್ಟು ಮಹಿಳೆಯರು, ಬೆಳಿಗ್ಗೆ ನೀರು ತರುವುದೇ ದೊಡ್ಡ ಕೆಲಸವಾಗಿದೆ ಎನ್ನುತ್ತಾರೆ ಗಂಗಮ್ಮ, ಹೊನ್ನಮ್ಮ.

ADVERTISEMENT

ಶಾಖವಾದಿ ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆ ಇದೆ. 4 ಜನ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಈ ಹಿಂದೆ ಗ್ರಾಮಸ್ಥರು ಕೊಳವೆಬಾವಿ ನೀರನ್ನೇ ಕುಡಿಯಲು ಬಳಸುತ್ತಿದ್ದರು. ಅದು ಫ್ಲೋರೈಡ್ ಯುಕ್ತವಾಗಿದ್ದ ಕಾರಣ, ಜನರ ಮೇಲೆ ಆರೋಗ್ಯ ಸಮಸ್ಯೆ ಉಂಟಾಯಿತು ಎಂಬ ದೂರಗಳು ಕೇಳಿ ಬಂದ ನಂತರ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಯಿತು. ಆದರೆ, ಈಗ ಘಟಕವು ಹಾಳಾಗಿದೆ. ಗ್ರಾಮಸ್ಥರು ಮತ್ತೆ ಕೊಳವೆ ಬಾವಿ ನೀರಿನ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಎನ್.ನರಸಿಂಗ ಮತ್ತು ಶರಣಪ್ಪ.

ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ, ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಮುಂದಾಗುತ್ತಿಲ್ಲ. ಜಿಲ್ಲಾಡಳಿತ ಎಚ್ಚೆತ್ತುಗೊಂಡು, ನೀರಿನ ಘಟಕ ದುರಸ್ತಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.