
ಸಿರವಾರ: ‘ಮಹಿಳೆ ಏನು ಮಾಡಿದರೂ ಅದು ಒಳಿತು ಬಯಸುವ ದಾರಿಯಾಗಿರುತ್ತದೆ. ಪ್ರತಿಯೊಬ್ಬ ಮಹಿಳೆ ನಡೆದುಕೊಂಡು ಬಂದಿರುವ ದಾರಿ ಅವಳ ಸಂಸ್ಕಾರದ ಮೂಲಾಧಾರವಾಗಿದೆ’ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಕಿ ಮಂಜುಳಾ ಸಗರದ ಹೇಳಿದರು.
ಪಟ್ಟಣದ ಸಜ್ಜಲಶ್ರೀ ಶರಣಮ್ಮ ತಾಯಿ ಶಾಖಾಮಠದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಭಾನುವಾರ ನಡೆದ ‘ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ’ದ ಕುರಿತ ತಾಲ್ಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಹಿಳೆಯರ ಸಬಲೀಕರಣ, ಎಲ್ಲಾ ರಂಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ’ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಮೋಹನ ನಾಯ್ಕ ಮಾತನಾಡಿ,‘ಮಹಿಳೆಯರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಕುಟುಂಬ ನಿರ್ವಹಣೆ ಜೊತೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕವಾಗಿ ಸಬಲರಾಗಲು ಈ ಮಹಿಳಾ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ತಾಲ್ಲೂಕು ಯೋಜನಾಧಿಕಾರಿ ಚಂದ್ರಹಾಸ.ಬಿ ಪ್ರಸ್ತಾವಿಕವಾಗಿ ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಜ್ಯೋತಿ ಉದ್ಘಾಟಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಅಯ್ಯನಗೌಡ ಏರಡ್ಡಿ, ಪ.ಪಂ ಅಧ್ಯಕ್ಷ ವೈ.ಭೂಪನಗೌಡ, ಜ್ಞಾನ ವಿಕಾಸ ಕೇಂದ್ರದ ಪ್ರಾದೇಶಿಕ ಯೋಜನಾಧಿಕಾರಿ ಸುಧಾ ಗಾಂವ್ಕರ್, ಎನ್.ರೇಣುಕಾ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಜ್ಞಾನಮಿತ್ರ, ಮೇಲ್ವಿಚಾರಕಿ ವನಿತಾ, ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಯಶೋಧಾ ಸೇರಿದಂತೆ ಯೋಜನೆಯ ಮೇಲ್ವಿಚಾರಕರು, ಸಿಬ್ಬಂದಿ ಸೇರಿದಂತೆ ಜ್ಞಾನ ವಿಕಾಸ ಕೇಂದ್ರಗಳ ಮಹಿಳಾ ಸದಸ್ಯರು ಭಾಗವಹಿಸಿದ್ದರು.