ADVERTISEMENT

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:24 IST
Last Updated 3 ಮಾರ್ಚ್ 2014, 10:24 IST

ರಾಮನಗರ: ‘ಸರ್ಕಾರಿ ನಿಯಮಗಳನ್ನು ಮೀರಿ ಬಿಲ್‌ಗಳಿಗೆ ಸಹಿ ಮಾಡುವ ಕೆಲಸ ನನ್ನಿಂದಾಗದು. ತಪ್ಪು ಲೆಕ್ಕಾಚಾರದ ಬಿಲ್‌ಗಳಿಗೆ ಅನುಮೋದನೆ ನೀಡುವಂತೆ ಒತ್ತಡ ಹೇರಿದರೆ ಸಹಿಸುವುದಿಲ್ಲ. ನಿಯಮದ ಪ್ರಕಾರ ಎಲ್ಲವೂ ಸರಿಯಿದ್ದರೆ ಸಹಿ ಮಾಡಲು ಅಭ್ಯಂತರವಿಲ್ಲ’

ಇದು ಜಿಲ್ಲಾಧಿಕಾರಿ ಡಾ.ಡಿ.ಎಸ್‌.­ವಿಶ್ವನಾಥ್‌ ಅವರು ಅಧಿಕಾರಿಗಳಿಗೆ ನೀಡಿದ ಖಡಕ್‌ ಎಚ್ಚರಿಕೆ. ಜಿಲ್ಲಾ ಪಂಚಾಯಿತಿ ಸಭಾಂ­ಗಣದಲ್ಲಿ ಜಿ.ಪಂ ಅಧ್ಯಕ್ಷ ಎಚ್‌.ಸಿ.ರಾಜಣ್ಣ ಅಧ್ಯಕ್ಷತೆಯಲ್ಲಿ ಶನಿ­ವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚನ್ನಪಟ್ಟಣದ ಗ್ರಾಮವೊಂದರಲ್ಲಿ ಕೇವಲ 100 ಜನ ಇದ್ದಾರೆ.  ಬರಗಾಲ ಎಂದು ಈ ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ದಿನವೊಂದಕ್ಕೆ 4.5 ಲಕ್ಷ ಲೀಟರ್ ನೀರು ಸರಬರಾಜು ಮಾಡ­ಲಾಗಿದೆ ಎಂಬ ಅಂಕಿ ಅಂಶ ಒದ­ಗಿಸಲಾಗಿದೆ. ಇಷ್ಟು ಕಡಿಮೆ ಜನಸಂಖ್ಯೆ ಇರುವ ಊರಿಗೆ ಇಷ್ಟೊಂದು ನೀರನ್ನು ಏತಕ್ಕೆ ಸರಬರಾಜು ಮಾಡಲಾಯಿತು? ನಿಯಮವನ್ನು ಪಾಲಿಸದೆ ಬಿಲ್‌ಗಳನ್ನು ಸೃಷ್ಟಿ ಮಾಡಿದರೆ ಅದಕ್ಕೆಲ್ಲ ಸಹಿ ಮಾಡುವವನು ನಾನಲ್ಲ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಟ್ಯಾಂಕರ್‌ಗಳಲ್ಲಿ ಸರಬರಾಜು ಮಾಡಿದ ನೀರಿನ ಬಿಲ್‌ಗಳಿಗೆ ಜಿಲ್ಲಾ­ಧಿಕಾರಿ ಸಹಿ ಹಾಕದ ಕಾರಣ ಗುತ್ತಿಗೆ­ದಾರರಿಗೆ ಹಣ ನೀಡಲಾಗಿಲ್ಲ ಎಂದು ಸಭೆಯಲ್ಲಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರಿಂದ, ಜಿಲ್ಲಾಧಿಕಾರಿ ಅವರು ಈ ರೀತಿ ಉತ್ತರಿಸಿದರು.

ಬರ ಪರಿಹಾರಕ್ಕೆಂದು ಸರ್ಕಾರ ನೀಡಿದ್ದ ₨1.20 ಕೋಟಿಯನ್ನು ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಗೆ ಬಿಡು­ಗಡೆ ಮಾಡಿ ತಿಂಗಳು ಕಳೆ­ಯುತ್ತಿದೆ. ಆದರೆ ಒಂದೇ ಒಂದು ತಾಲ್ಲೂ­ಕಿನಿಂದಲೂ ಕ್ರಿಯಾ ಯೋಜನೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಅಸ­ಮಾಧಾನ ವ್ಯಕ್ತಪಡಿಸಿದರು.

ಬಿಡುಗಡೆ ಮಾಡಿರುವ ಹಣಕ್ಕೂ ಕ್ರಿಯಾಯೋಜನೆ ಸಲ್ಲಿಸಿಲ್ಲ. ಬರ­ಪರಿಹಾರಕ್ಕೆ ಹಣದ ಕೊರತೆ ಇಲ್ಲ, ಆದರೆ ವ್ಯವಸ್ಥೆಯ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಅವರು ಹೇಳಿದರು.

ವಿವಿಧ ಇಲಾಖೆಗಳಲ್ಲಿ ಅಗತ್ಯವಾಗಿ ಬೇಕಿರುವ ಪ್ರಮುಖ ಬೇಡಿಕೆಗಳ ಪ್ರಸ್ತಾ­ವನೆ ಕೂಡಲೇ ಸರ್ಕಾರಿ  ಕಳುಹಿಸಿ ಅನುಷ್ಠಾನಗೊಳಿಸಲು ಅಧ್ಯಕ್ಷ ಎಚ್.ಸಿ.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ ಉಪಾಧ್ಯಕ್ಷ ಎಸ್.ಬಿ.ಗೌರಮ್ಮ, ಉಪಕಾರ್ಯದರ್ಶಿ ಲತಾ, ಯೋಜನಾಧಿಕಾರಿ ಧನುಷ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.