ADVERTISEMENT

ಅನುಷ್ಠಾನವಾಗದ ಕೃಷಿ ವಿಮಾ ಯೋಜನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ರಾಮನಗರ: ಅತಿವೃಷ್ಟಿ ಮತ್ತು ಅನಾವೃಷ್ಟಿಗಳನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಹಾಗೂ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ !

ಜಾಗೃತಿ ಕೊರತೆ ಅಥವಾ ತಾತ್ಸಾರ ದೃಷ್ಟಿಯಿಂದ ಈ ಯೋಜನೆಯನ್ನು ರೈತರು ನೋಡಿರುವ ಈ ಕಾರಣ ಇದರ ಅನುಷ್ಠಾನದಲ್ಲಿ ಜಿಲ್ಲೆ ಹಿಂದುಳಿದಿದೆ. ಜಿಲ್ಲೆಯಲ್ಲಿ ಬತ್ತ, ಮುಸುಕಿನ ಜೋಳ, ರಾಗಿ, ತೊಗರಿ, ಹುರುಳಿ, ಎಳ್ಳು, ಹರಳು ಮತ್ತು ನೆಲಗಡಲೆ ಕೃಷಿ ಬೆಳೆಗಳಿಗೆ ವಿಮಾ ಮಾಡಿಸಲು ಅವಕಾಶ ಇದೆ.

ಬತ್ತಕ್ಕೆ ಪ್ರತಿ ಹೆಕ್ಟೇರ್‌ಗೆ 728 ರೂಪಾಯಿ ವಿಮಾ ಕಂತನ್ನು ರೈತರು ಪಾವತಿಸಿದರೆ, ಬೆಳೆ ನಾಶ ಸಂಭವಿಸಿದ ಸಂದರ್ಭದಲ್ಲಿ 29,100 ರೂಪಾಯಿ ವಿಮಾ ಮೊತ್ತ ದೊರೆಯುತ್ತದೆ. ಅದೇ ರೀತಿ ರಾಗಿಗೆ 498 ರೂಪಾಯಿ ವಿಮಾ ಕಂತು ಪಾವತಿಸಿದರೆ, 19,900 ರೂಪಾಯಿ ವಿಮಾ ಮೊತ್ತ ದೊರೆಯುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂಭವಿಸಿದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡುವ ಪರಿಹಾರಕ್ಕೆ ಕಾಯುವ ಬದಲಿಗೆ ರಾಷ್ಟ್ರೀಯ ಕೃಷಿ ವಿಮೆ ಮಾಡಿಸಿದರೆ ರೈತರಿಗೆ ವಿಮಾ ಮೊತ್ತ ತಾನಾಗಿಯೇ ಹರಿದು ಬರುತ್ತದೆ. ಆದರೆ ಈ ಯೋಜನೆ ಬಗ್ಗೆ ಅಷ್ಟಾಗಿ ತಿಳಿಯದ ಕಾರಣ ಮತ್ತು ಮುತುವರ್ಜಿ ವಹಿಸದ ಕಾರಣ ಇದನ್ನು ಅಳವಡಿಸಿಕೊಳ್ಳಲು ರೈತರು ಮುಂದಾಗುತ್ತಿಲ್ಲ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಈ ಯೋಜನೆಯಡಿ 2011ರ ಮುಂಗಾರು ಹಂಗಾಮಿನಲ್ಲಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಪ್ರವಾಹ, ಆಲಿಕಲ್ಲು ಮಳೆ, ಭೂಕುಸಿತ ಮತ್ತು ಚಂಡ ಮಾರುತ, ಕ್ಷಾಮ ಇವುಗಳು ಉಂಟಾದ ಸಂದರ್ಭದಲ್ಲಿ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಿಸಿದ ಬ್ಯಾಂಕಿಗೆ ಅಥವಾ ಯೋಜನಾ ಅನುಷ್ಠಾನದ ಸಂಸ್ಥೆಯಾದ ಇನ್ಸುರೆನ್ಸ್ ಕಂಪೆನಿ ಆಫ್ ಇಂಡಿಯಾ, ಬೆಂಗಳೂರು, ಪ್ರಾದೇಶಿಕ ಕಚೇರಿ ಇವರಿಗೆ ಮಾಹಿತಿ ನೀಡಿ ಮಿಮಾ ಮೊತ್ತ ಪಡೆಯಬಹುದು ಎಂದು ಅಧಿಕಾರಿ ಹೇಳುತ್ತಾರೆ.

ಮುಂದಿನ ಬಾರಿಯಿಂದಾದರೂ ರೈತರು ಎಚ್ಚೆತ್ತುಕೊಂಡು ಮುಂಚಿತವಾಗಿಯೇ ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವಂತೆ ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.