ADVERTISEMENT

ಇಂದು ಲಕ್ಷ್ಮೀವೆಂಕಟೇಶ್ವರ ಬ್ರಹ್ಮರಥೋತ್ಸವ

ದೇವರ ಹೊಸಹಳ್ಳಿಯಲ್ಲಿ ಆಷಾಢಮಾಸದ ಜಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 8:26 IST
Last Updated 20 ಜುಲೈ 2013, 8:26 IST

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವರಹೊಸಹಳ್ಳಿಯ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಶ್ರೀಸಂಜೀವರಾಯ ಸ್ವಾಮಿಯ ತೋಮಾಲ ಸೇವೆ, ವೈಕುಂಠ ಸೇವಾದರ್ಶನ ಶನಿವಾರ (ಜು.20) ನಡೆಯಲಿದೆ.

ಆಷಾಢಮಾಸದ ಜಾತ್ರೆ ಎಂದೇ ಪ್ರಸಿದ್ಧಿ ಹೊಂದಿರುವ ದೇವರಹೊಸಹಳ್ಳಿ ಬ್ರಹ್ಮರಥೋತ್ಸವದ ಅಂಗವಾಗಿ ಈಗಾಗಲೆ ಪೂಜೆಗಳು ಆರಂಭವಾಗಿವೆ. ಗುರುವಾರ ಅಭಿಷೇಕ, ಮಹಾ ಮಂಗಳಾರತಿ, ಸಾಯಂಕಾಲ ಅಂಕುರಾರ್ಪಣ, ರಕ್ಷಾಬಂಧನ, ಪ್ರಾಕಾರೋತ್ಸವ ನಡೆಯಿತು. ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಕನಕಸ್ವಾಮಿ ವೃಂದದಿಂದ ಸಂಗೀತ ಕಾರ್ಯಕ್ರಮ, ಉತ್ಸವ, ಧ್ವಜಾರೋಹಣ ನಂತರ ದೇವರಹೊಸಹಳ್ಳಿ ಗ್ರಾಮಸ್ಥರಿಂದ ಕಾಶಿಯಾತ್ರೆ ಉತ್ಸವ, ತಿರುಕಲ್ಯಾಣ ಮಹೋತ್ಸವ, ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು.

ಜು.20ರ ಶನಿವಾರ ಬೆಳಿಗ್ಗೆ ಶ್ರೀಸಂಜೀವರಾಯ ಸ್ವಾಮಿ ಅವರ ಶಿಲ್ಪಕಲಾ ಸುವರ್ಣ ಮಂಟಪದ ಮಧ್ಯೆ ವೈಕುಂಠ ಸೇವಾದರ್ಶನ, ತೋಮಾಲ ಸೇವೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ವಿಮಾನ ಗೋಪುರಕ್ಕೆ ವಿದ್ಯುತ್ ಲಕ್ಷ ದೀಪೋತ್ಸವ, ಪುಷ್ಪಾಲಂಕಾರ ನಂತರ ಉಷಃಕಾಲ ಸುಪ್ರಭಾತ, ವಿಶ್ವರೂಪ ದರ್ಶನ ಸೇವೆ, ನಂತರ ತಿರುಪ್ಪಾವಡೆ ಸೇವೆ, ಗೋವು, ಅಶ್ವ ಮತ್ತು ಗಜಪೂಜೆ ನಡೆಯಲಿದೆ.

ಮಧ್ಯಾಹ್ನ 11.30 ರಿಂದ 12.00 ಗಂಟೆಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಸರ್ಕಾರಿ ಸೇವೆಯ ಬ್ರಹ್ಮರಥೋತ್ಸವ ನಡೆಯಲಿದೆ. ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಬಿ.ಜಿ.ನಂದಕುಮಾರ್, ರಾಮನಗರ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಉಪ ವಿಭಾಗಾಧಿಕಾರಿ ರಾಜೇಂದ್ರ ಪ್ರಸಾದ್, ತಾಲ್ಲೂಕು ದಂಡಾಧಿಕಾರಿ ಬಿ.ಆರ್.ದಯಾನಂದ್ ಭಾಗವಹಿಸುವರು.

ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಡೋಲೋತ್ಸವ ಮತ್ತು ಮಂದಹಾಸ ದೀಪೋತ್ಸವ, ರಾತ್ರಿ ತೆಪ್ಪೋತ್ಸವ ಮತ್ತು ವರ್ಣರಂಜಿತ ಬಾಣ ಬಿರುಸುಗಳ ಪ್ರದರ್ಶನದ ಜತೆಗೆ ವಿದ್ಯುತ್ ದೀಪದೊಂದಿಗೆ ಚಂದ್ರಮಂಡಲ ಪಲ್ಲಕ್ಕಿ ಉತ್ಸವ, ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಡಿಸಲಾಗಿದೆ.

ಜು.21ರ ಭಾನುವಾರ ಬೆಳಿಗ್ಗೆ ಶಾಂತಿಹೋಮ, ಕಳಸಪೂಜೆ, ಅಷ್ಟೋತ್ತರ ಶತ, ಅಮೃತ ಕಲಶ ಪೂಜೆ, ಮಹಾ ಕುಂಭಾಭಿಷೇಕ, ನೈವೇದ್ಯ, ಸಾಯಂಕಾಲ ಪೂರ್ಣಾಹುತಿ, ಧ್ವಜಾರೋಹಣ, ಅಷ್ಟಾವಧಾನ ಸೇವೆ, ರಾತ್ರಿ ಪುಷ್ಪಯಾಗ, ಜು.22ರ ಸೋಮವಾರ ಬೆಳಿಗ್ಗೆ ಅಭಿಷೇಕ ಮತ್ತು ಮಹಾ ಮಂಗಳಾರತಿ, ರಾತ್ರಿ ಶಯನೋತ್ಸವ ಮತ ನಾದಸ್ವರ, ಸ್ಯಾಕ್ಸೋಫೋನ್ ಕಾರ್ಯಕ್ರಮ ನೆರವೇರಲಿವೆ.

ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಚನ್ನಪಟ್ಟಣ ಹಾಗೂ ರಾಮನಗರ ಬಸ್ ನಿಲ್ದಾಣಗಳಿಂದ ವಿಶೇಷ ವಾಹನ ಸೌಕರ್ಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.