
ಕನಕಪುರ: ತಾಲ್ಲೂಕಿನ ಕಬ್ಬಾಳು ದೇವಸ್ಥಾನ ಬಳಿ ಕಚ್ಚುವನಹಳ್ಳಿ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ವಿದ್ಯಾರ್ಥಿ ಧನುಷ್ ಮೃತ ದೇಹವನ್ನು ಮೂರು ದಿನಗಳ ನಂತರ ಶುಕ್ರವಾರ ಹೊರ ತೆಗೆಯಲಾಯಿತು.
ಬೆಂಗಳೂರಿನ ಜೆಎಸ್ಎಸ್ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಬುಧವಾರ ಕಬ್ಬಾಳು ದೇವಸ್ಥಾನಕ್ಕೆ ಬಂದು ಪೂಜೆ ಮುಗಿಸಿ ಸಮೀಪದ ಕಚ್ಚುವನಹಳ್ಳಿ ದೊಡ್ಡ ಕೆರೆಯಲ್ಲಿ ಈಜಾಡಲು ಹೋಗಿ ಸಂತೋಷ ಮತ್ತು ಧನುಷ್ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದರು.
ಪೊಲೀಸರು ಮತ್ತು ಅಗ್ನಿಶಾಮಕ ದಳ ಮೃತ ದೇಹಗಳನ್ನು ಹೊರತೆಗೆಯುವ ಪ್ರಯತ್ನವನ್ನು ಬುಧವಾರ ರಾತ್ರಿವರೆಗೂ ನಡೆಸಿ ಸಿಗದಿದ್ದಾಗ ಗುರುವಾರ ಹುಡುಕಾಟ ನಡೆಸಿದ್ದರು. ಸಂತೋಷ್ ಮೃತ ದೇಹ ಗುರುವಾರ ಪತ್ತೆಯಾಗಿತ್ತು.
ಧನುಷ್ ಮೃತ ದೇಹಕ್ಕಾಗಿ ಗುರುವಾರ ರಾತ್ರಿವರೆಗೂ ಹುಡುಕಾಟ ನಡೆಸಿ ಸಿಗದಿದ್ದಾಗ ಹುಡುಕಾಟ ನಿಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ನುರಿತ ಈಜುಗಾರರು ಹಾಗೂ ಕ್ಯಾಮೆರಾ ಮೂಲಕ ನೀರಿನಲ್ಲಿ ಶವ ಪತ್ತೆ ಹಚ್ಚುವ ತಂತ್ರಜ್ಞರ ತಂಡ ಕಾರ್ಯಾಚರಣೆ ನಡೆಸಿತ್ತು.
ನುರಿತ ಈಜುಗಾರ ಈಶ್ವರ್ ಮಲ್ಪೆ ನೀರಿನ ಆಳಕ್ಕೆ ಇಳಿದು ಹುಡುಕಾಡಿದಾಗ ಧನುಷ್ ಶವ ಕೆಸರಿನಲ್ಲಿ ಸಿಲುಕಿಕೊಂಡಿತ್ತು.
ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.