ADVERTISEMENT

ಗಾಯನದೊಂದಿಗೆ ಅರಳಿದ ಚಿತ್ರ ಕಾವ್ಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಮಾಗಡಿ: ವನಿತಾ ವೃಂದದ ರಜತ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕುಂಚ ಬ್ರಹ್ಮ ಡಾ. ಬಿ.ಕೆ.ಎಸ್.ವರ್ಮ ಕಿರುತೆರೆ ನಟ ಕುದೂರಿನ ವೆಂಕಟಾದ್ರಿ ಗಾಯನದ ಜುಗಲ್‌ಬಂದಿ.. ಗಾಯನಕ್ಕೆ ಅನುಗುಣವಾಗಿ ರಚಿಸಿದ ವರ್ಣ ಚಿತ್ರಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು.

ಗಾಯಕ ವೆಂಕಟಾದ್ರಿ ಅವರ ಗಜವದನ ಹೇರಂಭ... ಸುಮಧುರ ಗೀತೆಗೆ, ಕಲಾವಿದ ಡಾ.ಬಿ.ಕೆ.ಎಸ್.ವರ್ಮ ಅವರು ಪಾರ್ವತಿ ಪರಮೇಶ್ವರರು ಪುತ್ರ ವಿನಾಯಕ ಸ್ವಾಮಿಯನ್ನು ಅಪ್ಪಿಕುಳಿತಿರುವ ಚಿತ್ರ ಬಿಡಿಸಿದರು. ಮೂರು ಗಂಟೆಗಳ ಕಾಲ ನಡೆದ ಈ ಜುಗಲ್‌ಬಂದಿ ಮಾರುತಿ, ಶಕ್ತಿದಾಯಿನಿ ಚಾಮುಂಡಿ, ಶ್ರೀಕೃಷ್ಣ, ರೈತನನ್ನು ಕಾಯುತ್ತಿರುವ ಬೆಡಗಿ..ಯಂತಹ ವೈವಿಧ್ಯಮಯ ಚಿತ್ರಗಳು ವರ್ಮ ಅವರ ಕುಂಚದಲ್ಲಿ  ಅರಳಿದವು.

ಲೇಖಕ ಕುದೂರಿನ ಗಂ.ದಯಾನಂದ ನಡೆಸಿಕೊಟ್ಟ, ನಿರೂಪಣೆಯಂತೂ ಕನ್ನಡ ಕಾವ್ಯಲೋಕದ ಹೊಸದೊಂದು ಹೊಳಪನ್ನು ಸೃಷ್ಟಿಸಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರು, ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು ಅವರನ್ನು ಸಂದರ್ಶಿಸಿದ್ದ ಡಾ. ಬಿ.ಕೆ.ಎಸ್.ವರ್ಮಾ ಅವರ ಬಾಲ್ಯದ ಘಟನೆಗಳನ್ನು ನಿರೂಪಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಿ.ಕೆ.ಎಸ್.ವರ್ಮ ಜೀವನಕ್ಕೆ ಹಣ ಬೇಕು. ಆದರೆ ಲೋಕದಲ್ಲಿರುವ ಎಲ್ಲಾ ಸಂಪತ್ತು ನಮಗೆ ಬೇಕು ಎಂಬುದು ಬೇಡ. ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಕಲೆ ಮತ್ತು ಸಾಂಸ್ಕೃತಿಕ ವಾತಾವಣರದಲ್ಲಿ ಕಂದಮ್ಮಗಳನ್ನು ಬೆಳೆಸಿ. ಕಷ್ಟ ಸುಖದಲ್ಲಿ ಎಲ್ಲರೂ ಒಂದಾಗಿ ತಾಳ್ಮೆಯಿಂದ ಬಾಳುವುದನ್ನು ರೂಡಿಸಿಕೊಳ್ಳಬೇಕು ಎಂದರು.

ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಎಸ್.ಎನ್,ನಟರಾಜು, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ವನಿತಾ ವೃಂದದ ಅಧ್ಯಕ್ಷೆ ಸಂಗೀತಾ ಪ್ರಸನ್ನ, ಕಾರ್ಯದರ್ಶಿ ಸೌಮ್ಯವಿನಯ್, ಪ್ರತಿಮಾ ಕಿರಣ್ ಕುಮಾರ್,ಸುಮ ನಂಜುಂಡಸ್ವಾಮಿ, ಸ್ಮಿತಾ ಸುನಿಲ್ ಇತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.