ಮಾಗಡಿ: ಯೋಜನಾ ಪ್ರಾಧಿಕಾರದ ವತಿಯಿಂದ ₹2 ಕೋಟಿ ವೆಚ್ಚದಲ್ಲಿ ಚಾರಿತ್ರಿಕ ಗೌರಮ್ಮನ ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು. ಪಟ್ಟಣದ ಗೌರಮ್ಮನಕೆರೆಗೆ ಹಾಲು ತುಪ್ಪ ಎರೆದು ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಹಿಂದೆ ಗೌರಮ್ಮನಕೆರೆ ತುಂಬಿ ಕೋಡಿಯಲ್ಲಿ ನೀರು ಹರಿದಿದ್ದಾಗ ಕಬಡ್ಡಿ ತಂಡದವರು ಕೆರೆಯಲ್ಲಿ ಬೆಳೆದಿದ್ದ ಕಳೆಯನ್ನು ಎಳೆದು ಹಾಕಲು ಮುಂದಾಗಿದ್ದರು. ಆಗ ಗೆಳೆಯ ಸೀನಪ್ಪ ನೀರಿನಲ್ಲಿ ಮುಳುಗಿ ಇನ್ನಿಲ್ಲದ ಕಷ್ಟಪಟ್ಟು ಅವನನ್ನು ನೀರಿನಿಂದ ಹೊರಗೆ ಎಳೆದಿದ್ದೆವು ಎಂದು ಬಾಲ್ಯದ ಘಟನೆಗಳನ್ನು ನೆನಪಿಸಿಕೊಂಡರು.
ರಂಗನಾಥ ಸ್ವಾಮಿ ತೆಪ್ಪೋತ್ಸವ ಸಮಿತಿ ಸಂಚಾಲಕ ತಗ್ಗಿಕುಪ್ಪೆ ಮುಕುಂದ ಮಾತನಾಡಿ ಕೆರೆಯ ಕೋಡಿಯ ಬಳಿ ಇರುವ ಗಣೇಶನ ಗುಡಿ ದುರಸ್ತಿ ಮಾಡಬೇಕು. ತೆಪ್ಪೋತ್ಸವದ ಕಾಲದಲ್ಲಿ ರಂಗನಾಥ ಸ್ವಾಮಿ ಉತ್ಸವ ಮೂರ್ತಿ ಕುಡಿಸಲು ಮಂಟಪ ಕಟ್ಟಿಸಿಕೊಡುವಂತೆ ಮನವಿ ಮಾಡಿದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್,ಮಂಜುನಾಥ ಮಾತನಾಡಿ ಈ ಹೊಸದಾಗಿ ಕಟ್ಟಿಸಿದ್ದ ಕಟ್ಟೆಯನ್ನು ತೆಗೆಸಲಾಗುವುದು. ಏರಿಯ ಮೇಲೆ ವಿದ್ಯುತ್ ದೀಪದ ವ್ಯವಸ್ಥೆ ಮಾಲಾಗುವುದು ಎಂದರು. ಬಿಜೆಪಿ ಮುಖಂಡ ಈಶ್ವರಪ್ಪ, ಕಾಂಗ್ರೆಸ್ ಕಳ್ಳರು ಬರುತ್ತಾರೆ ಸೇರಿಸಬೇಡಿ ಎಂಬ ಮಾತಿಗೆ ಸುದ್ದಿಗಾರರ ಪ್ರಶ್ನೆಗೆ ‘ಕೆರೆ ನೀರಿಗೆ ದೊಣೆ ನಾಯಕನ ಅಪ್ಪಣೆ ಕೇಳಬೇಕೆ?’ ಎಂದು ಎಚ್.ಎಂ.ರೇವಣ್ಣ ಪ್ರತಿಕ್ರಿಯೆ ನೀಡಿದರು.
‘ಈಶ್ವರಪ್ಪ ಅವರಿಗೆ ತಲೆ ಕೆಟ್ಟಿದೆ. ಪಕ್ಷದ ಕಾರ್ಯಕ್ರಮವನ್ನು ನಾಡಿನ ಜನತೆ ಸ್ವೀಕರಿಸಿದ್ದಾರೆ’ ಎಂದು ತಿಳಿಸಿದರು. ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವರಾಜಮ್ಮ ಮುಕುಂದ, ರಂಗಪ್ಪ, ಮಾಡಿ ರಂಗಯ್ಯ, ಅಪ್ಪೇಗೌಡ, ರಂಗಸ್ವಾಮಿ, ಪಾರ್ಥಯ್ಯ, ನಾರಾಯಣಪ್ಪ, ಅಣ್ಣಯ್ಯಪ್ಪ, ತಮ್ಮಯ್ಯ, ವಿಜಯಲಕ್ಷ್ಮೀ, ವರ್ತಕ ಎಎಸ್.ನಾಗರಾಜ ಶೆಟ್ಟಿ, ಲಕ್ಷ್ಮೀವೆಂಕಟರಮಣಸ್ವಾಮಿ ದೇಗುಲ ಟ್ರಸ್ಟಿನ ಶಾರದಾ ಸುರೇಶ್, ಈರಯ್ಯ, ಪೈಲ್ವಾನ್ ನಾರಾಯಣ ಸಿಂಗ್, ಮರಾಠ ಸಂಘದ ಮುಖಂಡ ಮೋಹನ್ಕುಮಾರ್ ಇದ್ದರು, ಅರ್ಚಕ ಕಿರಣ್್ ದೀಕ್ಷಿತ್ ಪೂಜೆ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.