ರಾಮನಗರ : ಜಲ ಮಂಡಳಿಯಿಂದ ಹಲವು ವಾರ್ಡ್ಗಳಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ. ನೀರಿಗಾಗಿ ಜನತೆ ಪರಿತಪಿಸುತ್ತಿದ್ದಾರೆ. ಆದರೆ ಇಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮುಂಭಾಗ ನಲ್ಲಿ ಸರಿಯಿಲ್ಲದ ಕಾರಣ ದಿನದ 24 ಗಂಟೆಯೂ ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದೆ.
ನೀರಿನ ಟ್ಯಾಂಕ್ನಿಂದ ಬಂದ ಮುಖ್ಯ ನೀರಿನ ಪೈಪಿಗೆ ಈ ನಲ್ಲಿಯನ್ನು ಹಾಕಲಾಗಿದೆ. ಆದ್ದರಿಂದ ಅದರ ಮೂಲಕ ನೀರು ಪೋಲಾಗುತ್ತಿದೆ. ಈ ರಸ್ತೆಯ ಮೂಲಕ ಹಲವು ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಜನರು ಓಡಾಡುತ್ತಾರೆ. ಆದರೆ ನಲ್ಲಿಯ ಮೂಲಕ ವ್ಯರ್ಥವಾಗುತ್ತಿರುವ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ ಎಂಬ ದೂರು ಜನರದು.
ಆಕ್ರೋಶ : ‘ಕಳೆದ ಹಲವು ತಿಂಗಳಿಂದ ನೀರು ವ್ಯರ್ಥವಾರಿ ಚರಂಡಿ ಸೇರುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಸರಿಪಡಿಸಿಲ್ಲ. ಈ ಕಾಲೇಜಿನಲ್ಲಿರುವ ಉಪನ್ಯಾಸಕರಾಗಲಿ, ಶಿಕ್ಷಕರಾಗಲಿ ಈ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಅವರಿಗೆ ಕಾಳಜಿ ಇಲ್ಲ, ನೀರನ್ನು ಉಳಿಸಿ ಎಂದು ಹೇಳುವವರು ಮೊದಲು ಇಂತಹ ನಲ್ಲಿಗಳನ್ನು ಸರಿಪಡಿಸಬೇಕು’ ಎನ್ನುತ್ತಾರೆ ನಿವಾಸಿ ಶಿವಶಂಕರ್.
‘ಹಲವು ವಾರ್ಡ್ಗಳಲ್ಲಿ ಆರು ದಿನಕ್ಕೆ ಒಮ್ಮೆ ನೀರನ್ನು ಬಿಡಲಾಗುತ್ತಿದೆ. ಈಚೆಗೆ ಮಳೆಯಾಗಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ಇನ್ನು ಕೆಲವೆ ತಿಂಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಕೂಡಲೆ ಜಲ ಮಂಡಳಿ ಅಧಿಕಾರಿಗಳು ನಲ್ಲಿ ಹಾಗೂ ಪೈಪ್ ಅನ್ನು ಸರಿಪಡಿಸಬೇಕು’ ಎಂದು ಗೃಹಿಣಿ ಕಾವ್ಯ ಹೇಳಿದರು.
‘ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದನ್ನು ನಮ್ಮ ಜನರು ಕಲಿಯಬೇಕು. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಮೇಲಿನ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ನಗರ ವ್ಯಾಪ್ತಿಯಲ್ಲಿ ಈ ರೀತಿ ನಲ್ಲಿ ಸರಿ ಇಲ್ಲದೆ ನೀರು ವ್ಯರ್ಥವಾಗುತ್ತಿದೆ. ಕೂಡಲೇ ಇಂಥವುಗಳನ್ನು ಗುರುತಿಸಿ, ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ನಿವಾಸಿ ರಾಜಶೇಖರಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.