ADVERTISEMENT

ಜೆಡಿಎಸ್‌ ಅಭ್ಯರ್ಥಿಗೆ ಮರುಳಾಗದಿರಿ

ಚಿಗಳೂರು ಗ್ರಾಮದಲ್ಲಿ ರೋಡ್‌ ಶೋ ಮೂಲಕ ಮತಯಾಚಿಸಿ ಬಾಲಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:47 IST
Last Updated 4 ಮೇ 2018, 11:47 IST
ಚಿಗಳೂರಿನಲ್ಲಿ ಎಚ್‌.ಸಿ. ಬಾಲಕೃಷ್ಣ ಅವರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು
ಚಿಗಳೂರಿನಲ್ಲಿ ಎಚ್‌.ಸಿ. ಬಾಲಕೃಷ್ಣ ಅವರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು   

ತಿಪ್ಪಸಂದ್ರ(ಮಾಗಡಿ): ‘ದೀನರ ಸೇವೆಯೇ ದೇವರ ಸೇವೆ ಎಂಬ ನಂಬಿಕೆಯಿಂದ ರಾಜಕಾರಣಕ್ಕೆ ಬಂದಿದ್ದೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ಚಿಗಳೂರು ಗ್ರಾಮದಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.‘ರಿಯಲ್‌ ಎಸ್ಟೇಟ್‌ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಜೆಡಿಎಸ್‌ಗೆ ನಾಡಿನಲ್ಲಿ ಮನ್ನಣೆ ಇಲ್ಲ. ಕಾಂಗ್ರೆಸ್‌ನಿಂದ 115 ಶಾಸಕರು ಆಯ್ಕೆಯಾಗಲಿದ್ದಾರೆ. ಜೆಡಿಎಸ್‌ನಿಂದ 35 ಅಥವಾ 40 ಶಾಸಕರು ಆಯ್ಕೆಯಾಗಬಹುದು. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತ. ಮೇ15ರ ನಂತರ ಜೆಡಿಎಸ್‌ ಅಭ್ಯರ್ಥಿ ಸ್ವಿಚ್‌ ಆಫ್‌ ರಾಜಕಾರಣಿ ಕಣ್ಮರೆಯಾಗಲಿದ್ದಾರೆ; ಹುಡುಕಬೇಕಾದೀತು’ ಎಂದು ಟೀಕಿಸಿದರು.

‘ನಾನು 24 ಗಂಟೆಯೂ ಜನರ ಸೇವೆ ಮಾಡುವ ರಾಜಕಾರಣಿ. ನನಗೆ ಮತನೀಡಿ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ಚುನಾವಣೆ ಮುಗಿದ ಬಳಿಕ ಬಗರ್‌ ಹುಕುಂ ಸಾಗುವಳಿದಾರರಿಗೆ ಅಕ್ರಮ ಸಕ್ರಮ ಮಾಡಿಸಿಕೊಡುತ್ತೇನೆ’ ಎಂದು  ಮನವಿ ಮಾಡಿದರು.

ADVERTISEMENT

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌ ಮಾತನಾಡಿ, ಶೇ90ರಷ್ಟು ಮತದಾರರ ಒಲವು ಎಚ್‌.ಸಿ.ಬಾಲಕೃಷ್ಣ ಅವರ ಮೇಲಿದೆ. ಪರ ಊರುಗಳಿಂದ ಬಂದ ಶಿಳ್ಳೆ ಹೊಡೆಯುವ 20 ಯುವಕರ ತಂಡದವರಿಗೆ ಮತ ನೀಡಬೇಡಿ. ಜೆಡಿಎಸ್‌ ಅಭ್ಯರ್ಥಿ ಸ್ಟಂಟ್‌ಗೆ ಮರುಳಾಗಬೇಡಿ. ಹತ್ತು ಸಾವಿರ ಬಹುಮತದ ಅಂತರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲುತ್ತಾರೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯ ಗಂಗಾಧರ್‌, ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ಕಾಂಗ್ರೆಸ್‌
ಮುಖಂಡರಾದ ಧನಂಜಯ, ಬಿ.ಎಸ್‌.ಕುಮಾರ್‌, ರಾಮಕೃಷ್ಣ, ಹುಲುವೇನಹಳ್ಳಿ ಕೆಂಪೇಗೌಡ, ರೈತ ಸಂಘದ ಅಧ್ಯಕ್ಷ ಚಂದ್ರಶೇಖರ್‌, ಗೋವಿಂದರಾಜು, ಪುರಸಭೆ ಸದಸ್ಯ ಸುರೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜು, ಧನಂಜಯ ನಾಯ್ಕ್, ಕೆ.ಎಚ್‌. ಕೃಷ್ಣಮೂರ್ತಿ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು.

ಚಿಕ್ಕಕಲ್ಯ, ಗಂಗೊಂಡನಹಳ್ಳಿ, ಬಿಸ್ಕೂರು, ಕಾಲೊನಿ ಇತರೆಡೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರೋಡ್‌ ಶೋ ನಡೆಸಿ ಮತಯಾಚಿಸಿದರು. ಎಚ್‌.ಸಿ.ಬಾಲಕೃಷ್ಣ ಅವರನ್ನು ಮಹಿಳೆಯರು ಆರತಿ ಬೆಳಗಿ ಗ್ರಾಮಗಳಿಗೆ ಸ್ವಾಗತಿಸಿದರೆ, ಯುವಕರು ಹೆಗಲಮೇಲೆ ಹೊತ್ತು ಕುಣಿದು ಜಯಕಾರ ಹಾಕಿದರು. ‌

ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬಂದಿದ್ದ ರಾಕೇಶ್‌, ಮಂಜು, ಶರತ್‌, ಸಂಜಯ್‌ ತಂಡದ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

**
ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಮೇಲೆ ಬಾಲಕೃಷ್ಣ ₹200 ಕೋಟಿ ಹಣ ಮಂಜೂರು ಮಾಡಿಸಿ ಕೆಲಸ ಮಾಡಿಸಿದ್ದಾರೆ
– ಗಂಗಾಧರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.