ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ದೂರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 6:05 IST
Last Updated 18 ಮಾರ್ಚ್ 2011, 6:05 IST

ಚನ್ನಪಟ್ಟಣ: ನೀತಿ ಸಂಹಿತೆ ಜಾರಿಯಾದ ನಂತರ ತಾಲ್ಲೂಕಿನ ನೀರಾವರಿ ಯೋಜನೆಗಳ ಜಾರಿ ಬಗ್ಗೆ ವಿವರಿಸುವ ಹೊತ್ತಿಗೆಯನ್ನು ಹೊರಡಿಸಿರುವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಂ.ಲಿಂ. ನಾಗರಾಜು ತಿಳಿಸಿದರು.ಚುನಾವಣೆಗಳು ಬಂದಾಗಲೆಲ್ಲ ಗಿಮಿಕ್ ಮಾಡುವುದನ್ನು ಚಾಳಿಯನ್ನಾಗಿಸಿಕೊಂಡಿರುವ ಯೋಗೇಶ್ವರ್ 12 ವರ್ಷಗಳ ಶಾಸಕಗಿರಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಯೋಗೇಶ್ವರ್ ಈ ರೀತಿಯ  ಪುಸ್ತಕಗಳನ್ನು ಮುದ್ರಿಸಿ ಹಂಚಿ ಜನರನ್ನು ದಿಕ್ಕು ತಪ್ಪಿಸುವ ಬದಲಿಗೆ  ನೈತಿಕವಾಗಿ ಚುನಾವಣೆಯನ್ನು ಎದುರಿಸಲಿ ಎಂದು ತಿಳಿಸಿದ ಅವರು 15ವರ್ಷವಾದರೂ ಗರಕಹಳ್ಳಿ ಏತನೀರಾವರಿ ಯೋಜನೆಪೂರ್ಣಗೊಳಿಸದಿರುವುದರು ಅವರ ವಚನ ಭ್ರಷ್ಟತೆಗೆ ಸಾಕ್ಷಿ ಎಂದರು.

ಗರಕಹಳ್ಳಿ ನೀರಾವರಿ ಯೋಜನೆ, ಬಿಸಿಲಮ್ಮ ಹಾಗೂ ಮಹದೇಶ್ವರ ದೇವಸ್ಥಾನದ ಕಾಮಗಾರಿಗಳನ್ನು ಚುನಾವಣೆ ಹತ್ತಿರವಾದಾಗ ಕೈಗೆತ್ತಿಕೊಳ್ಳುವ ಯೋಗೇಶ್ವರ್, ಚುನಾವಣೆ ನಂತರ ಅದನ್ನು ನೆನೆಗುದಿಗೆ ದೂಡುತ್ತಾರೆ. ಪೊಳ್ಳು ಭರವಸೆ, ಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡುವ ಯೋಗೇಶ್ವರ್‌ಗೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಎಂ.ಬಿ. ಮಲ್ಲಿಕಾರ್ಜುನಗೌಡ  ಅವರು ಆರೋಪಿಸಿದ್ದರು.

ಯೋಗೇಶ್ವರ್ ಆತ್ಮಸಾಕ್ಷಿಯಿಂದ ಚುನಾವಣೆ ಎದುರಿಸಲಿ. ಅವರ ಪೊಳ್ಳು ಭರವಸೆಗಳಿಗೆ ಕಡಿವಾಣ ಹಾಕಿ ಜನಪರ ಕಾಳಜಿಯನ್ನು ಸಾಬೀತುಪಡಿಸಲಿ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ತಿಳಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಎಂಜಿಕೆ ಪ್ರಕಾಶ್, ಎಸ್. ಉಮಾಶಂಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.