ADVERTISEMENT

ನೀರು ಶುದ್ಧೀಕರಣ ಘಟಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಕುದೂರು: ತಾಲ್ಲೂಕಿನ ಕುದೂರು ಹೋಬಳಿ ಕೇಂದ್ರದಲ್ಲಿ ವಾಟರ್ ಹೆಲ್ತ್ ಇಂಡಿಯಾದವರಿಂದ ಸ್ಥಾಪಿತವಾದ ನೀರಿನ ಶುದ್ಧೀಕರಣ ಘಟಕವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲರಾಜು ಬುಧವಾರ ಉದ್ಘಾಟಿಸಿದರು.

ಈ ನೀರಿನ ಶುದ್ಧೀಕರಣ ಘಟಕವನ್ನು ಶಿವಗಂಗೆ ಮುಖ್ಯ ರಸ್ತೆಯ ಬಳಿ ನಿರ್ಮಿಸಲಾಗಿದ್ದು ಕುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಸ್ಥರು ಇದರ ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ ಎಂದರು.
 ವಾಟರ್ ಹೆಲ್ತ್ ಇಂಡಿಯಾ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಪರವಾನಗಿ ಪಡೆದು ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ ಸೇರಿದಂತೆ ಪ್ರತಿ ರಾಜ್ಯಗಳಲ್ಲಿ 475 ಘಟಕಗಳನ್ನು ಸ್ಥಾಪಿಸಲಾಗಿದೆ.

ಹಳ್ಳಿ ಮತ್ತು ನಗರವಾಸಿಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಉಂಟಾಗುವ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸುವ ಮತ್ತು ಜನತೆಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರನ್ನು ಒದಗಿಸುವ ಗುರಿಹೊಂದಿದೆ.

ರಾಮನಗರ ಜಿಲ್ಲೆಯಲ್ಲಿ ಸ್ಥಾಪಿತವಾದ ಪ್ರಥಮ ನೀರಿನ ಶುದ್ಧೀಕರಣ ಘಟಕ ಕದೂರಿನಲ್ಲಿ ಸ್ಥಾಪಿತವಾಗಿದ್ದು ಖಾಸಗಿ ನೀರಿನ ಸಂಸ್ಥೆಗಳು ಒದಗಿಸುವ ನೀರಿಗಿಂತಲೂ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ  ಶುಚಿಯಾದ ರುಚಿಕರವಾದ ಶುದ್ಧ ನೀರನ್ನು ಪೂರೈಸಲಾಗುತ್ತದೆ.

ಈ ನೀರಿನ ಶುದ್ಧೀಕರಣ ಘಟಕ ನೀರಿನಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀಗಳನ್ನು ನಾಶಮಾಡಿ ಶುದ್ಧ ನೀರನ್ನು ಒದಗಿಸುವ ಕಾರ್ಯಮಾಡುತ್ತಿದೆ.ಪ್ರತಿ ಲೀಟರಿಗೆ 35 ಪೈಸೆಯಂತೆ 20 ಲೀಟರ್‌ನ ನೀರಿನ ಕ್ಯಾನ್ ಒಂದಕ್ಕೆ 7 ರೂಪಾಯಿ ನಿಗದಿ ಮಾಡಲಾಗಿದೆ. ನೀರನ್ನು ಸಂಗ್ರಹಿಸುವ ಕ್ಯಾನ್‌ಗಳನ್ನು ಸಂಸ್ಥೆಯವರೇ ಪೂರೈಸಲಿದ್ದು ಪ್ರತಿನಿತ್ಯ 300ಕ್ಕೂ ಅಧಿಕ ಕ್ಯಾನ್‌ಗಳ ಮಾರಟವಾಗುತ್ತಿವೆ.

ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ನೀರಿನ ವಿತರಣೆ ಪ್ರಾರಂಭವಾಗಿ ರಾತ್ರಿ 7 ಗಂಟೆವರಗೆ ಈ ಘಟಕ ಕಾರ್ಯ ನಿರ್ವಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.