ರಾಮನಗರ: ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಪಕ್ಷಗಳ ವರಿಷ್ಠರು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲು ಕೆಲ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
‘ಆಪರೇಷನ್ ಕಮಲ’ ಕಾರ್ಯಾಚರಣೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಇಬ್ಬರೂ ಶಾಸಕರನ್ನು (ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ್, ಜೆಡಿಎಸ್ನಿಂದ ಎಂ.ಸಿ.ಅಶ್ವತ್ಥ್) ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ಬಿಜೆಪಿಗೆ ಸರ್ಕಾರವನ್ನು ಸುಭದ್ರ ಪಡಿಸಿಕೊಳ್ಳಲು ಈ ಉಪ ಚುನಾವಣೆ ಮಹತ್ವದ್ದಾಗಿದೆ. ಜೆಡಿಎಸ್ ಶಾಸಕ ಅಶ್ವತ್ಥ್ ಅವರನ್ನು ಪಕ್ಷದಿಂದ ಕಸಿದುಕೊಂಡ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮಾಜಿ ಮುಖ್ಯಮಂತ್ರಿಯಾದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಇನ್ನೂ ಈ ಭಾಗದಲ್ಲಿ ಕಾಂಗ್ರೆಸ್ ಪಾರುಪತ್ಯೆ ಮೆರೆಸಲು ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಣತಂತ್ರ ರೂಪಿಸುತ್ತಿದ್ದಾರೆ. ಈ ಮೂರು ಪಕ್ಷಗಳು ಪ್ರಬಲ ಸ್ಪರ್ಧೆ ನೀಡುವ ಈ ಕ್ಷೇತ್ರದಲ್ಲಿ ಚುನಾವಣಾ ಕಾರ್ಯ ನಿರ್ವಹಿಸಲು ಕೆಲ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ.
‘ಚುನಾವಣಾ ಕಾರ್ಯದಿಂದ ಮುಕ್ತಗೊಳಿಸಿ’: ಎರಡನೇ ಬಾರಿ ಉಪ ಚುನಾವಣೆ ನಡೆಯುತ್ತಿರುವ ಚನ್ನಪಟ್ಟಣದಲ್ಲಿ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹಿಂಜರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಪ ಚುನಾವಣೆಯಲ್ಲಿ ನಡೆಯಬಹುದಾದ ಹಣ, ಹೆಂಡ ಹಾಗೂ ತೋಳ್ಬಲದ ಪ್ರಭಾವವನ್ನು ನೆನೆಸಿಕೊಂಡ ಅಧಿಕಾರಿಯೊಬ್ಬರು ಚುನಾವಣಾ ಕಾರ್ಯದಿಂದ ಮುಕ್ತಿಗೊಳಿಸುವಂತೆ ತನ್ನ ಹಿರಿಯ ಅಧಿಕಾರಿಗಳನ್ನು ಪರಿ ಪರಿಯಾಗಿ ಬೇಡಿಕೊಂಡ ಪ್ರಸಂಗ ಸೋಮವಾರ ನಡೆದಿದೆ.
‘ಆರೋಗ್ಯ ಸಮಸ್ಯೆ ಇದೆ. ಅನುಭವವೂ ಇಲ್ಲ’: ‘ನನಗೆ ಬಿ.ಪಿ, ಶುಗರ್ ಇದೆ. ಆದ್ದರಿಂದ ಚುನಾವಣಾ ಕಾರ್ಯಕ್ಕೆ ದಯವಿಟ್ಟು ನನ್ನನ್ನು ನೇಮಿಸಿಕೊಳ್ಳಬೇಡಿ’ ಎಂದು ಅಂಗಲಾಚಿದ ಈ ಹಿರಿಯ ಅಧಿಕಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಮುಂದೆ ಕಣ್ಣೀರು ಹಾಕಿದ ಘಟನೆಯೂ ನಡೆದಿದೆ ಎಂದು ತಿಳಿದು ಬಂದಿದೆ.
‘ನನ್ನ ಸೇವಾ ಅವಧಿಯಲ್ಲಿ ‘ರಿಟರ್ನಿಂಗ್’ ಅಧಿಕಾರಿಯಾಗಿ ಕೆಲಸ ಮಾಡಿಲ್ಲ. ಹಾಗಾಗಿ ನನಗೆ ಅನುಭವದ ಕೊರತೆ ಇದೆ. ಅದಾಗ್ಯೂ ‘ಇ-ಮೇಲ್’ ಮತ್ತಿತ್ತರ ತಂತ್ರಜ್ಞಾನದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಸಾರ್ವತ್ರಿಕ ಚುನಾವಣೆ ಆಗಿದ್ದರೆ ಹೇಗೋ ಕಾರ್ಯ ನಿರ್ವಹಿಸುತ್ತಿದ್ದೆ. ಆದರೆ ಇದು ಉಪ ಚುನಾವಣೆ. ಇಲ್ಲಿ ಟೆನ್ಷನ್ ಹೆಚ್ಚು ಇರುತ್ತದೆ. ನನ್ನ ಆರೋಗ್ಯ ಬೇರೆ ಸರಿಯಿಲ್ಲ. ಆದ್ದರಿಂದ ನನ್ನನ್ನು ಬಿಟ್ಟುಬಿಡಿ ಪ್ಲೀಸ್...’ ಎಂದು ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಮುಂದೆ ಈ ಅಧಿಕಾರಿ ಅಳಲು ತೋಡಿಕೊಂಡಿದ್ದಾರೆ.
ಧೈರ್ಯ ತುಂಬಿದ ಹೆಚ್ಚುವರಿ ಡಿ.ಸಿ: ‘ಧೈರ್ಯದಿಂದ ಕಾರ್ಯ ನಿರ್ವಹಿಸಿ. ನಿಮ್ಮ ಜತೆ ಇತರ ಚುನಾವಣಾ ಅಧಿಕಾರಿಗಳು ಇರುತ್ತಾರೆ. ನಾವೂ ಇರುತ್ತೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಧೈರ್ಯ ತುಂಬುತ್ತಿದ್ದರೂ, ಆ ಅಧಿಕಾರಿಗೆ ಧೈರ್ಯ ಬಂದಂತೆ ಕಾಣಲಿಲ್ಲ ಎಂದು ತಿಳಿದು ಬಂದಿದೆ.
ಕೊನೆಗೆ ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿದ ಈ ಅಧಿಕಾರಿ, ಚುನಾವಣಾ ಕಾರ್ಯದಿಂದ ಬಿಡುಗಡೆಗೊಳಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಲಿಲ್ಲ. ‘ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಜಿಲ್ಲೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾದವರೇ ಚುನಾವಣೆಯ ‘ರಿಟರ್ನಿಂಗ್’ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಈ ನಿಯಮವನ್ನು ಬದಲಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು’ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿ ಪ್ರತಿಕ್ರಿಯೆ: ‘ಚನ್ನಪಟ್ಟಣ ಉಪ ಚುನಾವಣೆಯ ರಿಟರ್ನಿಂಗ್ ಆಫೀಸರ್ ಆಗಿ ರಾಮನಗರ ಜಿಲ್ಲೆಯ ವಿಶೇಷ ಭೂಸ್ವಾಧೀನ ಅಧಿಕಾರಿ ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿದೆ. ಉಪ ಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳ ರಿಟರ್ನಿಂಗ್ ಆಫೀಸರ್ಗಳ ಹೆಸರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಅನುಭವದ ಕೊರತೆ ಇದೆ ಎಂದು ವೆಂಕಟೇಶ್ ಅವರು ಮನವಿ ಮಾಡಿದ್ದರು. ಆದ್ದರಿಂದ ಚುನಾವಣಾ ಕಾರ್ಯಕ್ಕೆ ರಿಟರ್ನಿಂಗ್ ಆಫೀಸರ್ಗೆ ಎಲ್ಲ ರೀತಿಯ ನೆರವು ನೀಡುವಂತೆ ಜಿಲ್ಲೆಯ ಉಪ ವಿಭಾಗಾಧಿಕಾರಿ ಅವರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಚನ್ನಪಟ್ಟಣ ತಹಶೀಲ್ದಾರ್ ಸೇರಿದಂತೆ ಇತರ ಚುನಾವಣಾ ಅಧಿಕಾರಿಗಳು ಇವರಿಗೆ ನೆರವಾಗಲಿದ್ದಾರೆ’ ಎಂದು ರಾಮನಗರ ಜಿಲ್ಲೆಯ ಹೆಚ್ಚುವರಿ ಹೊಣೆ ಹೊತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಕೆ.ರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.