ADVERTISEMENT

ಬಿಜೆಪಿ ಮುಖಂಡರ ಗಂಭೀರ ಆರೋಪ

ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತಕ್ಕೆ ಡಿಕೆಶಿ, ಡಿ.ಕೆ.ಸುರೇಶ್ ಕಾರಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 10:57 IST
Last Updated 10 ಏಪ್ರಿಲ್ 2018, 10:57 IST

ಚನ್ನಪಟ್ಟಣ: ಪಟ್ಟಣದಲ್ಲಿ ಹದಿನೈದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತವಾಗುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿಯ ಎಸ್ಸಿ ಎಸ್ಟಿ ಘಟಕದ ಮುಖಂಡ ಸದಾನಂದ ಅವರು ನೇರ ಆರೋಪ ಮಾಡಿದ್ದಾರೆ.

ಪಟ್ಟಣದ 5ನೇ ಅಡ್ಡರಸ್ತೆಯ ಶಾಸಕ ಸಿ.ಪಿ.ಯೋಗೇಶ್ವರ್ ಗೃಹಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್ ಪ್ರಕ್ರಿಯೆಯ ವಿಳಂಬದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಚುನಾವಣೆ ದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಈ ಟೆಂಡರ್ ಪ್ರಕ್ರಿಯೆ ಮುಂದೂಡಿಸಿದ್ದಾರೆ ಎಂದು ದೂರಿದರು.

ಪಟ್ಟಣದಲ್ಲಿ ಬೃಹತ್ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು ಎಂದು ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಯೋಗೇಶ್ವರ್ ಅವರು ₹2.5 ಕೋಟಿ ಬಿಡುಗಡೆ ಮಾಡಿಸಿದ್ದರು. 2017ರ ಸೆ. 11ರಂದು ₹3 ಕೋಟಿ ವ್ಯವಸ್ಥೆ ಮಾಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ನೀಡಿದ್ದರು. ಆದರೆ ಸಚಿವರು ಹಾಗೂ ಸಂಸದರು ಈ ಟೆಂಡರ್ ಪ್ರಕ್ರಿಯೆ ಮುಂದೂಡಿಸಿದ್ದಾರೆ ಎಂದರು.

ADVERTISEMENT

2012ರಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದಾಗ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಸದರ ನಿಧಿಯ ಮೂಲಕ ₹10 ಲಕ್ಷ ಹಣ ಕೊಡುವುದಾಗಿ ಪತ್ರ ನೀಡಿದ್ದರು. ಆದರೆ, ಆ ಹಣ ನೀಡಿಲ್ಲ. ಕಾಮಗಾರಿಗೆ ₹2 ಕೋಟಿ ಬಿಡುಗಡೆ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದರು. ಆದರೆ, ಇಲ್ಲಿಂದಲೂ ಒಂದು ರೂಪಾಯಿ ಹಣ ಬಂದಿಲ್ಲ ಎಂದರು.

ಅಂಬೇಡ್ಕರ್ ಭವನ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜಕೀಯ ಮಾಡುತ್ತಿವೆ. ತಾಲ್ಲೂಕಿನ ದಲಿತರ ಮತಗಳನ್ನು ಪಡೆಯಬೇಕು ಎಂಬ ಉದ್ದೇಶದಿಂದ ಯೋಗೇಶ್ವರ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದಲಿತ ಮೋರ್ಚಾದ ಸಿದ್ದರಾಮಯ್ಯ, ಚಕ್ಕಲೂರು ಚೌಡಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.