ಮಾಗಡಿ: ಸೂಕ್ಷ್ಮಮನಸ್ಸಿನ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಪುರುಷರು ಮುಂದಾಗಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಕಮಲಮ್ಮ ಹನುಮಂತೇಗೌಡ ಇಲ್ಲಿ ಅಭಿಪ್ರಾಯಪಟ್ಟರು.
ಪಟ್ಟಣದ ಜೀವಿಕಾ ಮತ್ತು ಅರುಣೋದಯ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರನ್ನು ಅವಮಾನಿಸುವುದು ಭಾರತ ಮಾತೆಯನ್ನು ಅವಮಾನಿಸಿದಂತೆ ಎಂಬ ಮನೋಭಾವನೆ ಪುರುಷರಲ್ಲಿ ಬೆಳಸಬೇಕಿದೆ. ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವುದು ಲೈಂಗಿಕ ದೌರ್ಜನ್ಯ ದೇಶಕ್ಕೆ ಅಂಟಿರುವ ಕಳಂಕ ಎಂದು ವಿಷಾದಿಸಿದರು. ಆಧುನೀಕತೆ ಪಾಶಕ್ಕೆ ಸಿಕ್ಕ ಕೆಲವು ಮಹಿಳೆಯರು ಸಹ ಸಿರಿವಂತಿಕೆಯ ಹೆಸರಿನಲ್ಲಿ ಅರೆಬರೆ ಮತ್ತು ಪಾರದರ್ಶಕ ಬಟ್ಟೆ ಧರಿಸಿ ದೇಹ ಪ್ರದರ್ಶನ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ತಹಶೀಲ್ದಾರ್ ವಿ.ನಾಗರಾಜ ಮಾತನಾಡಿ, ಇನ್ನೂ ಬೆಳಕು ಕಾಣದಿರುವ ಅಲೆಮಾರಿ, ಬುಡಕಟ್ಟು ಸಮುದಾಯಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರ ನೆರವಿಗೆ ವಿವಿಧ ಸಂಘ ಸಂಸ್ಥೆಗಳು ಮುಂದಾಗಬೇಕಿದೆ. ವರದಕ್ಷಿಣೆ, ಗಂಡನ ಕಿರುಕುಳ, ಲೈಂಗಿಕ ದೌರ್ಜನ್ಯಗಳ ವಿರುದ್ಧ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದರು.
ವಕೀಲರಾದ ರವಿಕಲಾ, ಗೋಪಾಲಗೌಡ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಇರುವ ಕಾನೂನು ಕುರಿತು ಮಾತನಾಡಿದರು.ಬಿಇಒ ಶ್ರೀಧರ್, ತಾ.ಪಂ.ಸದಸ್ಯ ಜಿ.ಕೃಷ್ಣ, ಜೀವಿಕಾ ಸಂಚಾಲಕ ಗಂಗಹನುಮಯ್ಯ, ವನಿತಾ ವೃಂದದ ಅಧ್ಯಕ್ಷೆ ಸಂಗೀತಾ ಪ್ರಸನ್ನಕುಮಾರ್, ಸುಗ್ಗನಹಳ್ಳಿ ಜಯಮ್ಮ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.