ADVERTISEMENT

ರಾಮನಗರ: 12ರಿಂದ ಜಾನಪದ ಲೋಕೋತ್ಸವ.

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 19:30 IST
Last Updated 9 ಫೆಬ್ರುವರಿ 2011, 19:30 IST

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ರಾಮನಗರ ಜಿಲ್ಲೆಯ ಜಾನಪದ ಲೋಕದಲ್ಲಿ ಇದೇ 12-13ರಂದು ‘ಜಾನಪದ ಲೋಕೋತ್ಸವ-2011’ ಹಮ್ಮಿಕೊಂಡಿದ್ದು, ಜಾನಪದ ಕಲೆಗಳ ಪ್ರದರ್ಶನ, ಹಾಗೂ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಅಧ್ಯಕ್ಷ ಡಾ.ಜಿ.ನಾರಾಯಣ ಅವರು ತಿಳಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 300 ಜಾನಪದ ಕಲಾವಿದರು ಆಗಮಿಸಲಿದ್ದು, ಪ್ರತಿದಿನ ಸಂಜೆ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
 
ಫೆ.12ರಂದು ಸಂಜೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮವಿದ್ದು, ರಾಜ್ಯ ಹಣಕಾಸು ಆಯೋಗದ ವರದಿ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ ನೆರವೇರಿಸುವರು. ಫೆ.13ರಂದು ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ಸುಮಾರು 100 ಕಲಾವಿದರು ಹಾಗೂ ಕಲಾತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ವಿವಿಧ ಜನಪದ ಕಲೆಗಳಾದ ಜಗ್ಗಲಿಗೆ ಮೇಳ, ಪುರವಂತಿಕೆ, ಕೊಡವರ ಸುಗ್ಗಿ ಕುಣಿತ, ಡೊಳ್ಳಿನ ಕುಣಿತ, ಕರಪಾಲ ಮೇಳ, ಉರುಮೆ ಮೇಳ, ನಾಟಕ, ಗೀತಗಾಯನ ನಡೆಯಲಿದೆ ಎಂದು ತಿಳಿಸಿದರು.

ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿ, ಸೋಬಾನೆ ಚಿಕ್ಕಮ್ಮ ಪ್ರಶಸ್ತಿ, ದೊಡ್ಡಮನೆ ಪ್ರಶಸ್ತಿ, ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ನುಡಿದರು. ಕರಕುಶಲ ವಸ್ತುಗಳ ತಯಾರಿಕೆ ಕುರಿತ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಕಾರ್ಯಾಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು. ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಕಾರ್ಯದರ್ಶಿ ಡಾ.ಚಕ್ಕೆರೆ ಶಿವಶಂಕರ್ ಗೋಷ್ಠಿಯಲ್ಲಿದ್ದರು.

ಇಂದು ಹೊಂಗನೂರು ಜಾತ್ರೆ


ಚನ್ನಪಟ್ಟಣ:
ತಾಲ್ಲೂಕಿನ ಹೊಂಗನೂರು ಗ್ರಾಮದ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ನಡೆಯಲಿದೆ.ತಹಶೀಲ್ದಾರ್ ಎಸ್.ಆರ್.ಕೃಷ್ಣಯ್ಯ, ಮಾಜಿ ಶಾಸಕರಾದ ಸಿ.ಪಿ.ಯೋಗೇಶ್ವರ್, ಎಂ.ಸಿ.ಅಶ್ವಥ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಡಾ. ಆರ್.ಎಸ್. ನಾಯರ್, ಮೇಲ್ಮನೆ ಸದಸ್ಯ ಪುಟ್ಟಣ್ಣ, ಡಿಎಸ್ಪಿ ಟಿ.ಸಿದ್ದಪ್ಪ ಇತರರು  ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.