ಹೊನ್ನಿಗನಹಳ್ಳಿ (ಚನ್ನಪಟ್ಟಣ): ಆಧುನಿಕ ಸಾಹಿತ್ಯದ ಬೆಳವಣಿಗೆಯಲ್ಲಿ ವಚನಕಾರರ ವಚನಗಳು ಬಹಳ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹಿರಿಯ ಸುಗಮ ಸಂಗೀತ ಗಾಯಕ ಶಿವಮಹಾದೇವು ಮಂಡ್ಯ ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಅಕ್ಕ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ ಇವರ ವತಿಯಿಂದ ಏರ್ಪಡಿಸಿದ್ದ ವಚನಕರರ ಪದಗಳು ಹಾಗೂ ಸೋಬಾನೆ ಹಾಡುಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ವಚನಕಾರರ ಪದಗಳು ಸ್ತ್ರೀ ಸಾಮಾನ್ಯರಿಗೆ ಪ್ರಾಪಂಚಿಕ ಜ್ಞಾನವನ್ನು ಹಾಗೂ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿವೆ ಎಂದರು.
ಹಿರಿಯ ರಂಗಭೂಮಿ ಕಲಾವಿದ ಪ್ರಕಾಶ್ ಮಾತನಾಡಿ, ಆಧುನಿಕತೆಯ ಅಬ್ಬರದ ನಡುವೆ ಮೂಲೆಗುಂಪಾಗಿರುವ ವಚನ ಸಾಹಿತ್ಯವನ್ನು ಪ್ರಚಾರಗೊಳಿಸುತ್ತಿರುವ ಇಂತಹ ಸಂಘಸಂಸ್ಥೆಗಳಿಗೆ ಸರ್ಕಾರ ಉತ್ತೇಜನ ನೀಡಬೇಕು ಎಂದರು.
ಹಿರಿಯ ತಬಲ ಕಲಾವಿದ ಎಸ್.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಪುಟ್ಟಸ್ವಾಮಿ, ಸೋಬಾನೆ ಕಲಾವಿದರಾದ ಮರಿಯಮ್ಮ, ನಾಗರಾಜು ಭಾಗವಹಿಸಿದ್ದರು.
ಜನಪದ ಗಾಯಕರಾದ ಬಸವರಾಜು, ಪ್ರಸನ್ನ ಕುಮಾರ್, ಶಿವಣ್ಣ ಮತ್ತು ತಂಡದವರು ವಚನ ಗಾಯನವನ್ನು ನಡೆಸಿಕೊಟ್ಟರು. ಕಲಾವಿದರಾದ ಬಸಮ್ಮ ಮತ್ತು ತಂಡ ಹಾಗೂ ಸಾಕಮ್ಮ ಮತ್ತು ತಂಡದವರು ಸೋಬಾನೆ ಪದಗಳ ಗಾಯನ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.