ADVERTISEMENT

ವನ್ಯಜೀವಿ ಸಂರಕ್ಷಣೆಗೆ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಆನೇಕಲ್: ಉದ್ಯಾನವನದ ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಪಡೆಯುವ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಕೊಡುಗೆ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ನುಡಿದರು.

ಅವರು ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ 31 ಪ್ರಾಣಿಗಳನ್ನು ದತ್ತು ಪಡೆದ ನಂತರ ಮಾತನಾಡಿದರು.

ಉದ್ಯಾನವನದಲ್ಲಿನ ಎಲ್ಲ ಪ್ರಾಣಿಗಳಿಗೆ ನೆರವಿನ ಅವಶ್ಯಕತೆಯಿದೆ. ನಮ್ಮ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವನ್ಯಜೀವಿಗಳನ್ನು ದತ್ತು ಪಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ಮಾತನಾಡಿ, ದತ್ತು ಕಾರ್ಯಕ್ರಮದ ಮೂಲಕ ಇದುವರೆಗೆ 70 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಕುಟುಂಬ ಸಮೇತ ಆಗಮಿಸಿದ್ದ ರಾಜೀವ್ ಚಂದ್ರಶೇಖರ್ 6.89 ಲಕ್ಷ ರೂ.ಗಳ ಚೆಕ್ ಅನ್ನು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಹಸ್ತಾಂತರಿಸುವ ಮೂಲಕ ದತ್ತು ಪ್ರಕ್ರಿಯೆ ಪೂರ್ಣಗೊಳಿಸಿದರು.

ರಾಜೀವ್ ಚಂದ್ರಶೇಖರ್ ದಂಪತಿ ಹೆಸರಿನಲ್ಲಿ ಲವ್‌ಬರ್ಡ್ಸ್, ಸಿಂಹ, ಆನೆ ಹಾಗೂ ರಾಯಲ್ ಬೆಂಗಾಲ್ ಬಿಳಿಹುಲಿ ಸೇರಿದಂತೆ ಆರು ಪ್ರಾಣಿ ಹಾಗೂ ಅವರ ಮಕ್ಕಳ ಹೆಸರಿನಲ್ಲಿ ಜೀಬ್ರಾ, ಚಿರತೆ, ನೀರ‌್ಗುದುರೆ (ಹಿಪ್ಪೋಪೊಟಮಸ್), ಕರಡಿ, ಕಾಳಿಂಗ ಸರ್ಪಗಳನ್ನು ದತ್ತು ಪಡೆಯಲಾಗಿದೆ.

ಇದೇ ಸಂದರ್ಭದಲ್ಲಿ ಸಚಿವ ಯೋಗೇಶ್ವರ್ ಹಾಗೂ ರಾಜೀವ್ ಚಂದ್ರಶೇಖರ್ ಹಾರ್ನ್‌ಬಿಲ್ ಪಕ್ಷಿಯ ಆವರಣವನ್ನು ಅನಾವರಣಗೊಳಿಸಿದರು. ಕುಟುಂಬ ಸಮೇತ ಉದ್ಯಾನವನಕ್ಕೆ ಆಗಮಿಸಿದ್ದ ಸಚಿವರು ಹಾಗೂ ರಾಜ್ಯಸಭಾ ಸದಸ್ಯರು ಸಫಾರಿ ವೀಕ್ಷಿಸಿ ಸಂತಸಪಟ್ಟರು.

ನಾಮಕರಣ: ಉದ್ಯಾನದಲ್ಲಿನ ಆನೆಗಳಾದ ವೇದ ಮತ್ತು ವನಿತಾ ದಂಪತಿಗೆ ಜನಿಸಿದ್ದ ಎರಡು ಮರಿಗಳಿಗೆ ನಾಮಕರಣ ಸಹ ಮಾಡಿದರು. ಸಚಿವರು `ದ್ರೋಣಾಚಾರ್ಯ~ ಎಂದು ಒಂದು ಮರಿಗೆ ನಾಮಕರಣ ಮಾಡಿದರೆ, ರಾಜ್ಯಸಭಾ ಸದಸ್ಯರು `ಮೀನಾ~ ಎಂದು ಮತ್ತೊಂದು ಮರಿಗೆ ನಾಮಕರಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.