ADVERTISEMENT

ವಯಲಗಂ ತರಕಾರಿ ಬೆಳೆಗಾರ ಸಂಘದ ವಾರ್ಷಿಕೋತ್ಸವ ತರಕಾರಿ ಬೆಳೆಗಾರರಿಗೆ ಸೌಲಭ್ಯ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಮಾಗಡಿ:  ತಲೆಮಾರುಗಳಿಂದ ತುಂಡು ಭೂಮಿಯನ್ನೆ ನಂಬಿ ತರಕಾರಿ ಬೆಳೆದು ಬದುಕು ಸಾಗಿಸುತ್ತಿರುವ ತಿಗಳಗೌಡ ಜನಾಂಗದ ತರಕಾರಿ ಬೆಳೆಗಾರರಿಗೆ ಸರ್ಕಾರ ಸವಲತ್ತುಗಳನ್ನು ನೀಡಬೇಕು ಎಂದು ಪಟ್ಟಣದ ಹಿರಿಯ ಮುಖಂಡ ಯಜಮಾನ್ ರಂಗಯ್ಯ ಇಲ್ಲಿ ಆಗ್ರಹಿಸಿದರು.ಪಟ್ಟಣದ ಹೊಂಬಾಳಮ್ಮನಪೇಟೆಯಲ್ಲಿ ನಡೆದ ಮಾಗಡಿ ‘ವಯಲಗಂ ತರಕಾರಿ ಬೆಳೆಗಾರರ ಸೌಹಾರ್ದ’ ಸಹಕಾರ ಸಂಘದ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಎರಡು-ಮೂರು ದಶಕಗಳ ಹಿಂದೆ ತರಕಾರಿ ಬೆಳೆಯಲು ದೇಸಿ ವಿಧಾನಗಳನ್ನು ಅನುಸರಿಸುತ್ತಿದ್ದೆವು. ಸೆಗಣಿ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಬಳಸಿ ತರಕಾರಿ ಬೆಳೆಯುತ್ತಿದ್ದೆವು. ಬೆಳೆಗೆ ತಗುಲುತ್ತಿದ್ದ ರೋಗ ರುಜಿನಗಳಿಗೆ ಹಸುವಿನ ಸಗೆಣಿಯ ಬೆರಣಿಯನ್ನು ಸುಟ್ಟು, ಅದರ ಬೂದಿಯನ್ನು ಮುಂಜಾವಿನಲ್ಲಿ ಎರಚುತ್ತಿದ್ದೇವು. ಈಗ ರಸಗೊಬ್ಬರ, ಕೀಟನಾಶಕ  ಬಳಸಿ ಬೆಳೆಯುತ್ತಿದ್ದೇವೆ. ನಾಟಿ ಬೀಜಗಳೇ ಇಲ್ಲದಂತಾಗಿದೆ. ಎಲ್ಲವನ್ನೂ ಕೊಂಡು ತರುತ್ತಿರುವುದರಿಂದ ಬೆಳೆ ಬೆಳೆಯುವುದು ದುಬಾರಿಯಾಗಿದೆ ಎಂದು ವಿಷಾದಿಸಿದರು.

ಸರ್ಕಾರ ತರಕಾರಿ ಬೆಳೆಗಾರರಿಗೆ ವಿಶೇಷ ಸವಲತ್ತುಗಳನ್ನು ನೀಡಬೇಕಿದೆ. ನಾಟಿ ಬೀಜ ಉಳಿಸುವ ನಿಟ್ಟಿನಲ್ಲಿ ಬೆಳೆಗಾರರಿಗೆ ತರಬೇತಿ ನೀಡಬೇಕು ಎಂದು ಮನವಿ ಮಾಡಿದರು. ಹಳ್ಳಿಗಳಲ್ಲಿ ಯುವಕರು ಮುಂಜಾವಿನಲ್ಲಿ ತೋಟಗಳಿಗೆ ಹೋಗಿ ಮಣ್ಣು ಮುಟ್ಟಿ ಕೆಲಸ ಮಾಡಬೇಕು ಎಂದು ಯಜಮಾನ್ ರಂಗಯ್ಯ ಸಲಹೆ ನೀಡಿದರು. ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಕೃಷಿ ವಿಜ್ಷಾನಿ ನರಸೇಗೌಡ, ರೈತರು ಇನ್ನು ಮುಂದೆ ತರಕಾರಿ ಬೀಜಕ್ಕಾಗಿ ಕೃಷಿ ವಿಶ್ವ ವಿದ್ಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಚಂದೂರಾಯನಹಳ್ಳಿ ಬೀಜೋತ್ಪಾದನಾ ಕೇಂದ್ರದಲ್ಲಿ ಸಕಲ ವಿವರಗಳು ಲಭ್ಯವಿವೆ. ಆ ಕೇಂದ್ರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ  ಮಾಗಡಿ ‘ವಯಲಗಂ ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರ ಸಂಘ’ದ ವಾರ್ಷಿಕೋತ್ಸವ ನಡೆಯಿತು. ಪುರಸಭೆಯ ಸದಸ್ಯ ಜಯರಾಮಯ್ಯ, ಮಾಜಿ ಸದಸ್ಯ ಗಂಗರೇವಣ್ಣ, ಅಂತರರಾಷ್ಟ್ರೀಯ ನೀರು ನಿರ್ವಹಣೆ ಸಂಸ್ಥೆಯ ವೈಜ್ಞಾನಿಕ ಸಲಹೆಗಾರ ಯಾದವ್, ಧಾನ್ ಪ್ರತಿಷ್ಠಾನದ ಅಧಿಕಾರಿ ಶಂಕರ್ ಪ್ರಸಾದ್ ಮಾತನಾಡಿದರು.

ಆಯ್ಕೆ
: ಮಾಗಡಿ ವಯಲಗಂ ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ 2011ರಿಂದ 2015ರ ಸಾಲಿನ ಆಡಳಿತ ಮಂಡಳಿಗೆ ಮಂಜುನಾಥ್ (ಅಧ್ಯಕ್ಷ), ನಾಗರತ್ನಮ್ಮ(ಉಪಾಧ್ಯಕ್ಷೆ), ಗಂಗನರಸಿಂಹಯ್ಯ(ಕಾರ್ಯದರ್ಶಿ) ಆಯ್ಕೆ ಮಾಡಲಾಯಿತು. ತರಕಾರಿ ಬೆಳೆಗಾರರು ಹೊಂಬಾಳಮ್ಮನಪೇಟೆ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.