ರಾಮನಗರ: ಜಿಲ್ಲೆಯ ಮೊರಾರ್ಜಿ ದೇಸಾಯಿ ಸೇರಿದಂತೆ ವಸತಿ ಶಾಲೆಗಳಲ್ಲಿ ಮಕ್ಕಳ ಕೈಗಳಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಇರಕೂಡದು. ಮಕ್ಕಳ ಅನುಕೂಲಕ್ಕೆಂದು ಪ್ರತಿ ವಸತಿ ಶಾಲೆಯಲ್ಲೂ ಕಾಯಿನ್ ಬೂತ್ ಇಲ್ಲವೆ ಹಾಸ್ಟೆಲ್ಗೊಂದು ಮೊಬೈಲ್ ಮಾತ್ರ ಇರಬೇಕು ಎಂದು ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಕೆಲವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ, ಪಾಲನೆ ಆಗುತ್ತಿಲ್ಲ. ವಿದ್ಯಾರ್ಥಿಗಳ ಬಳಿ ಮೊಬೈಲ್ ಇರುವುದು ಒಳ್ಳೆಯದಲ್ಲ. ಇದರಿಂದ ಅವರ ವ್ಯಾಸಂಗಕ್ಕೆ ತೊಡಕಾಗಬಹುದು. ಈ ಬಗ್ಗೆ ಪೋಷಕರಿಗೂ ತಿಳಿಹೇಳಿ, ಮಕ್ಕಳಿಗೆ ಮೊಬೈಲ್ ಕೊಡಿಸದಂತೆ ಸೂಚನೆ ನೀಡಿ. ಒಂದು ವೇಳೆ ಮಕ್ಕಳು ಮೊಬೈಲ್ ಇಟ್ಟುಕೊಂಡಿದ್ದರೆ ಅದನ್ನು ವಶಕ್ಕೆ ತೆಗೆದುಕೊಳ್ಳಿ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿಯೂ ಒಂದೇ ರೀತಿಯ ಊಟದ ಮೆನು ಇರಬೇಕು. ಆದರೆ ಒಂದೊಂದು ವಸತಿಶಾಲೆಯಲ್ಲಿ ಒಂದೊಂದು ಬಗೆಯನ್ನು ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳು ಶುಚಿ ಮತ್ತು ರುಚಿಯಾದ ಆಹಾರ ನೀಡಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ ಎಂದು ಅಧ್ಯಕ್ಷರು ಕಿಡಿಕಾರಿದರು.
ಅಲ್ಲದೆ ಹಲವು ವಸತಿ ಶಾಲೆಗಳಲ್ಲಿ ಊಟದ ಪಟ್ಟಿಯನ್ನೇ ಹಾಕಿಲ್ಲ. ಸರಿಯಾಗಿ ನಿರ್ವಹಣೆ ಮತ್ತು ಮೇಲುಸ್ತುವಾರಿ ಮಾಡದಿದ್ದರೆ ವಾರ್ಡನ್ಗಳು ಮನ ಬಂದಂತೆ ನಡೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ದಿಢೀರನೇ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು.
ಕೆಲ ವಸತಿ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲ ಎಂಬ ಕೂಗು ಕೇಳಿ ಬಂದಿದೆ. ಸರ್ಕಾರದಿಂದ ಸಾಕಷ್ಟು ಅನುದಾನ ಪ್ರತಿ ವರ್ಷವೂ ಬರುತ್ತಿದ್ದರೂ ಮೂಲ ಸೌಕರ್ಯ ಕೊರತೆ ಇದೆ ಎಂಬ ಮಾತು ಕೇಳಿ ಬರುತ್ತಿರುವುದು ಸರಿಯಲ್ಲ. ಅನುದಾನವನ್ನು ಸರಿಯಾಗಿ ಬಳಸಿಕೊಂಡು ಶಾಲೆಗಳಲ್ಲಿ ಉತ್ತಮ ಸೌಕರ್ಯ ಕಲ್ಪಿಸಬೇಕು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ವಸತಿ ಶಾಲೆಯಿಂದ ಹೊರಹೋಗುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿರಬೇಕು. ಈ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಹೆಚ್ಚು ಕಾಳಜಿ ತೋರಿ, ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಅಧಿಕಾರಿಗಳಿಗೆ ಜವಾಬ್ದಾರಿ: ವಸತಿ ಶಾಲೆಗಳಲ್ಲಿ ನಿರ್ವಹಣೆಯ ಗುಣಮಟ್ಟವನ್ನು ಹೆಚ್ಚಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ನೀಡುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ತಿಳಿಸಿದರು. ಒಂದು ಅಥವಾ ಎರಡು ಹಾಸ್ಟೆಲ್ಗಳಿಗೆ ಅನ್ವಯವಾಗುವಂತೆ ಒಬ್ಬೊಬ್ಬ ಅಧಿಕಾರಿಗೆ ಜವಾಬ್ದಾರಿ ನೀಡಿ, ಶಾಲೆಯಲ್ಲಿ ಮೂಲ ಸೌಕರ್ಯ ಮತ್ತು ಗುಣಮಟ್ಟದ ನಿರ್ವಹಣೆಯ ಜವಾಬ್ದಾರಿ ನೀಡುವಂತೆ ಸಿಇಒಗೆ ಸೂಚಿಸಿದರು.
ಜಿ.ಪಂ. ಸಿಇಓ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಹಾಸ್ಟೆಲ್ಗಳಲ್ಲಿ ಬಾಕಿ ಉಳಿದಿರುವ ದುರಸ್ತಿ ಕೆಲಸಗಳನ್ನು ಮಾ.15ರೊಳಗೆ ಮುಗಿಸಬೇಕು. ಕಾಮಗಾರಿ ನಡೆಯುವಾಗ ಪ್ರಾರಂಭ ಹಾಗೂ ಅಂತಿಮ ಹಂತದ ಛಾಯಾಚಿತ್ರಗಳನ್ನು ನೀಡಬೇಕು. ಊಟದಲ್ಲಿ ಶುಚಿ ಹಾಗೂ ರುಚಿಗೆ ಒತ್ತು ನೀಡಬೇಕು. ಜೊತೆಗೆ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ಇಲ್ಲದೇ ಇರುವ ಕಡೆ, ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರನ್ನು ಸಂಪರ್ಕಿಸಿ ಲಭ್ಯವಿರುವ ಸರ್ಕಾರಿ ಹಾಗೂ ಗೋಮಾಳದ ಜಮೀನನ್ನು ಗುರುತಿಸಿ ಎಂದು ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಕಾರಿ ರಂಗೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಸುಮಯ್ಯ ರೂಹಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.ಚಂದ್ರ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.