ರಾಮನಗರ: ಶನಿವಾರದಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅಡಿ ಸಂಸ್ಕರಿತ ರೇಷ್ಮೆ ನೂಲಿಗೆ ಶೇ 5ರಷ್ಟು ತೆರಿಗೆ ವಿಧಿಸಿ ರುವುದನ್ನು ಕೈಬಿಡುವಂತೆ ಒತ್ತಾಯಿಸಿ ರಾಮನಗರ ರೇಷ್ಮೆ ರೀಲರ್ಗಳು, ಸಂಸ್ಕರಣೆದಾರರು ಮತ್ತು ನೇಕಾರರ ಕೈಗಾರಿಕಾ ಸಹಕಾರ ಸೊಸೈಟಿ ವತಿ ಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ರೈಲು ನಿಲ್ದಾಣದಲ್ಲಿ ಸಮಾವೇಶಗೊಂಡ ರೇಷ್ಮೆ ಸಂಸ್ಕರಣೆದಾರರು ಅಲ್ಲಿಂದ ಕಂದಾಯ ಭವನಕ್ಕೆ ಮೆರ ವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿ ದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
‘ಕಚ್ಚಾ ರೇಷ್ಮೆಗೆ ಜಿಎಸ್ಟಿ ಅಡಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ ಸಂಸ್ಕರಣೆ ಮಾಡಿದ ನೂಲಿನ ಉಂಡೆಗಳಿಗೆ ಶೇ 5ರಂತೆ ತೆರಿಗೆ ವಿಧಿಸಿರುವುದು ಸರಿಯಲ್ಲ. ಇದರಿಂದ ಈ ವೃತ್ತಿಯನ್ನೇ ನಂಬಿದ ಸಾವಿರಾರು ನೌಕರರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಕಚ್ಚಾ ಗೂಡನ್ನು ನೂಲನ್ನಾಗಿ ಸಂಸ್ಕರಿಸುವ ಪ್ರಕ್ರಿಯೆಯಿಂದ ನೂಲಿನ ಸ್ವರೂಪ ಬದಲಾಗುವುದಿಲ್ಲ. ಅದನ್ನು ಶುಭ್ರಗೊಳಿಸಿ, ಬಲಗೊಳಿಸಿ ಸುತ್ತಲಾ ಗುತ್ತದೆಯೇ ಹೊರತು ಬಣ್ಣವನ್ನಾಗಿ, ಗಾತ್ರವನ್ನಾಗಲಿ ಬದಲಿ ಸುವುದಿಲ್ಲ. ಸಂಸ್ಕರಿತ ನೂಲನ್ನು ಯಥಾವತ್ತಾಗಿ ಕಟ್ಟಿ ನೇಕಾರರಿಗೆ ನೀಡಲಾಗುತ್ತಿದೆ. ಹೀಗಾಗಿ ಇದಕ್ಕೆ ತೆರಿಗೆ ಹಾಕುವುದು ನ್ಯಾಯ ಸಮ್ಮತವಲ್ಲ. ಸರ್ಕಾರ ಈ ನಿರ್ಧಾರ ಕೈಬಿಟ್ಟು, ನೂಲಿಗೂ ತೆರಿಗೆ ವಿನಾಯಿತಿ ನೀಡಬೇಕು’ ಎಂದು ಆಗ್ರಹಿಸಿದರು.
‘ರೇಷ್ಮೆ ಸಂಸ್ಕರಣ ಘಟಕಗಳಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಹೊಸ ತೆರಿಗೆಯಿಂದ ಈ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಇದರಿಂದ ಗೂಡಿನ ಬೆಲೆ ಕುಸಿಯಲಿದ್ದು, ರೈತರಿಗೂ ತೊಂದರೆ ಉಂಟಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ನೂಲಿನ ಮೇಲೆ ಹೇರಲು ಹೊರಟಿರುವ ತೆರಿಗೆಯನ್ನು ವಾಪಸ್ ಪಡೆಯಬೇಕು. ಇದರಿಂದ ಸಂಸ್ಕರಣೆ ದಾರರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು’ ಎಂದು ಒತ್ತಾಯಿಸಿದರು.
ಸೊಸೈಟಿಯ ಅಧ್ಯಕ್ಷ ಮಹಮ್ಮದ್ ಶಫಿ, ಪದಾಧಿಕಾರಿಗಳಾದ ಮಹಮ್ಮದ್ ಸಲಾವುದ್ದೀನ್, ನಸರುಲ್ಲಾ ಖಾನ್, ಮಹಮ್ಮದ್ ಸಲೀಮ್, ಹಬೀಬ್ ಉಲ್ಲಾ ಇತರರು ಪಾಲ್ಗೊಂಡಿದ್ದರು.
**
ಕಚ್ಚಾ ರೇಷ್ಮೆಗೆ ತೆರಿಗೆ ವಿನಾಯಿತಿ ನೀಡಿ, ನೂಲು ಸಂಸ್ಕರಣೆಗೆ ಶೇ 5 ತೆರಿಗೆ ವಿಧಿಸಿರುವುದು ಸರಿಯಲ್ಲ. ಉದ್ಯಮದಲ್ಲಿ ತೊಡಗಿಸಿಕೊಂಡವರು ಬೀದಿಗೆ ಬೀಳಬೇಕಾಗುತ್ತದೆ.
-ಮಹಮ್ಮದ್ ಶಫಿ
ಅಧ್ಯಕ್ಷ, ರಾಮನಗರ ರೇಷ್ಮೆ ರೀಲರ್ಗಳು, ಸಂಸ್ಕರಣೆದಾರರು ಮತ್ತು ನೇಕಾರರ ಕೈಗಾರಿಕಾ ಸಹಕಾರ ಸೊಸೈಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.