ADVERTISEMENT

‘ವೈಚಾರಿಕ ಚಿಂತನೆ ಅಳವಡಿಸಿಕೊಳ್ಳಿ’

ರಾಷ್ಟ್ರಕವಿಗಳ ಕೊಡುಗೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 5:34 IST
Last Updated 2 ಜನವರಿ 2014, 5:34 IST

ಚನ್ನಪಟ್ಟಣ:  ಕನ್ನಡಿಗರಲ್ಲಿ ವೈಚಾರಿಕ ಚಿಂತನೆಯನ್ನು ಬೆಳೆಸಿದ ರಾಷ್ಟ್ರಕವಿ ಗಳಾದ ಕುವೆಂಪು ಹಾಗೂ ಜಿ.ಎಸ್. ಶಿವರುದ್ರಪ್ಪ ಅವರು ಹಾಕಿಕೊಟ್ಟ ಸಾಹಿತ್ಯದ ಸನ್ಮಾರ್ಗದಲ್ಲಿ ಎಲ್ಲರೂ ಸಾಗ ಬೇಕು ಎಂದು ಮದ್ದೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಕೃಷ್ಣೇಗೌಡ ಹೇಳಿದರು.

ತಾಲ್ಲೂಕಿನ ಕೆಂಗಲ್ ಬಳಿಯ ಹೊಂಬೇಗೌಡ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು, ಡಾ.ಅಂಬೇಡ್ಕರ್ ಸಾಂಸ್ಕೃತಿಕ ಕಲಾ ಟ್ರಸ್ಟ್, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ವತಿಯಿಂದ ಇತ್ತೀಚಿಗೆ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಸ್ಮರಣೆ ಹಾಗೂ ಜಿ.ಎಸ್. ಶಿವರುದ್ರಪ್ಪ ಅವರಿಗೆ ಭಾವಗೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುವೆಂಪು ಹಾಗೂ ಶಿವರುದ್ರಪ್ಪ ಅವರು ತಮ್ಮ ಸಾಹಿತ್ಯದ ಮೂಲಕ  ಅತ್ಯಮೂಲ್ಯ ಮಾನವೀಯ ಮೌಲ್ಯಗಳ ಸಂದೇಶ ನೀಡಿದ್ದಾರೆ. ಕುವೆಂಪು ನಾಡಗೀತೆ, ರೈತಗೀತೆ ನೀಡುವ ಮೂಲಕ ನಾಡಪ್ರೇಮ ಮತ್ತು ಅನ್ನ ದಾತರ ಬಗ್ಗೆ ಅಭಿಮಾನ ಮೂಡಿಸಿದರೆ, ಶಿವರುದ್ರಪ್ಪ ಭಾವನಾತ್ಮಕ ಸಂದೇಶ ಸಾರುವ ಭಾವ ಗೀತೆಗಳನ್ನು ರಚಿಸಿದ್ದಾರೆ. ಇವರ ಆದರ್ಶ  ಎಲ್ಲರಿಗೂ ಸ್ಫೂರ್ತಿ ಎಂದರು.

ಉದ್ಘಾಟನೆ ನೆರವೇರಿಸಿ ಮಾತ ನಾಡಿದ ಪ್ರಾಂಶುಪಾಲ ರಮೇಶ್, ತಾಂತ್ರಿಕ ವಿದ್ಯಾರ್ಥಿಗಳಿಗೂ ಸಾಹಿತ್ಯದ ನಂಟು ಬೇಕು ಎಂದರು. ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪುಟ್ಟಸ್ವಾಮಿಗೌಡ, ರೈತ ಜನ ಜಾಗೃತಿ ಅಧ್ಯಕ್ಷ ಟಿ.ರಮೇಶ್, ತಾಲ್ಲೂಕು ಸಮತಾ ಸೈನಿಕ ದಳದ ಅಧ್ಯಕ್ಷ ಚಕ್ಕೆರೆ ಲೋಕೇಶ್, ಶಿಕ್ಷಕರಾದ ಸಿ. ಚಂದ್ರ ಶೇಖರ್, ಎಂ.ಟಿ.ನಾಗರಾಜು, ಜಿಲ್ಲಾ ಲೇಖಕರ ವೇದಿಕೆ ಕಾರ್ಯದರ್ಶಿ ಸಿ.ಎ. ಶಾಂತಕುಮಾರ್, ಎನ್.ಎಸ್. ಎಸ್. ಸಂಯೋಜನಾಧಿಕಾರಿ ಮರಿ ದೇವರು, ಉಪನ್ಯಾಸಕರಾದ ಸಂಘದ ಅನಿತಾ, ಸುಧಾ, ಆನಂದ ರಾಮ, ಸೋಬಾನೆ ಕಲಾವಿದೆ ರಾಜಮ್ಮ, ಮಣಿಯಮ್ಮ, ಸಿ.ಎ. ಶಾಂತಕುಮಾರ್, ಶಾರದ ನಾಗೇಶ್, ಸುಧಾ ಇತರರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.