ADVERTISEMENT

ಮಾಗಡಿ: ರೈತರಿಗೆ ₹ 1.11 ಕೋಟಿ ಬೆಳೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 4:57 IST
Last Updated 18 ಸೆಪ್ಟೆಂಬರ್ 2022, 4:57 IST
ಶಾಸಕ ಎ. ಮಂಜುನಾಥ್‌ ಸಂತ್ರಸ್ತರಿಗೆ ಪರಿಹಾರದ ಚೆಕ್‌ ವಿತರಿಸಿದರು. ಎಚ್‌.ಎಂ. ಕೃಷ್ಣಮೂರ್ತಿ, ಚಂದ್ರ, ಶಿವಕುಮಾರ್ ಇದ್ದರು
ಶಾಸಕ ಎ. ಮಂಜುನಾಥ್‌ ಸಂತ್ರಸ್ತರಿಗೆ ಪರಿಹಾರದ ಚೆಕ್‌ ವಿತರಿಸಿದರು. ಎಚ್‌.ಎಂ. ಕೃಷ್ಣಮೂರ್ತಿ, ಚಂದ್ರ, ಶಿವಕುಮಾರ್ ಇದ್ದರು   

ಮಾಗಡಿ: ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ 174 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ಸರ್ಕಾರದಿಂದ ₹ 1.11 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

ಕಾಳಾರಿ ಕಾವಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚಹನುಮೇಗೌಡನ ಪಾಳ್ಯದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ಮಳೆಗೆ ಸಿಲುಕಿ ಮನೆ ಬಿದ್ದಿದ್ದರೆ ₹ 95 ಸಾವಿರ ಪರಿಹಾರ ಸಿಗಲಿದೆ. ಹೊಸದಾಗಿ ಮನೆ ಕಟ್ಟಿಕೊಳ್ಳಲು ₹ 5 ಲಕ್ಷ ಕೊಡಿಸಲಾಗುವುದು. ಮಳೆಗೆ ಸಿಲುಕಿ ಹಾನಿಗೊಳಗಾದವರ ವರದಿಯಲ್ಲಿ ಲೋಪದೋಷ ಇದ್ದರೆ ಸರಿಪಡಿಸಲಾಗುವುದು ಎಂದರು.

ADVERTISEMENT

ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಅಥವಾ ಖಾಸಗಿ ಭೂಮಿಗಳಲ್ಲಿ ಮನೆ ಕಟ್ಟಿಕೊಂಡಿರುವ ಲಂಬಾಣಿ ತಾಂಡ, ಕಾಡುಗೊಲ್ಲರ ಹಟ್ಟಿ, ಭೋವಿ ದೊಡ್ಡಿ, ಕಾಲೊನಿಗಳನ್ನು 94ಸಿ ಅನ್ವಯ ಗುರುತಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗುವುದು. ತಾಲ್ಲೂಕಿನಲ್ಲಿ ಗೋಮಾಳ ರಕ್ಷಣೆಗೆ ಕ್ರಮವಹಿಸಲಾಗುವುದು ಎಂದರು.

ತಾಲ್ಲೂಕು ಜೆಡಿಎಸ್‌ ಘಟಕದ ಅಧ್ಯಕ್ಷೆ ಶೈಲಜಾ, ಜಿ.ಪಂ. ಮಾಜಿ ಸದಸ್ಯೆ ಚಂದ್ರಮ್ಮ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ, ಕಾಳಾರಿ ಕಾವಲ್ ಗ್ರಾ.ಪಂ. ಅಧ್ಯಕ್ಷ ಶಿವರಾಮಯ್ಯ, ತಾ.ಪಂ. ಇಒ ಚಂದ್ರ, ಶಿರಸ್ತೇದಾರ್‌ ಶಿವಕುಮಾರ್‌, ಉಪ ತಹಶೀಲ್ದಾರ್‌ ಮಂಜುನಾಥ್‌, ಕಂದಾಯ ಅಧಿಕಾರಿ ವೆಂಕಟೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.