ಮಾಗಡಿ: ರಾಜಕೀಯ ಮನ್ನಣೆ ಇಲ್ಲದ ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ₹250 ಕೋಟಿ ನೀಡಿ ಪ್ರೋತ್ಸಾಹ ನೀಡಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದರು.
ತಿರುಮಲೆಯಲ್ಲಿ ರಂಗನಾಥ ಸ್ವಾಮಿ ಅರವಟಿಗೆ ಜೀರ್ಣೋದ್ಧಾರ ಸಮಿತಿ ಟ್ರಸ್ಟ್ನ ವತಿಯಿಂದ ಭಾನುವಾರ ನಡೆದ ಕುರುಹಿನ ಶೆಟ್ಟರ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುರುಹಿನ ಶೆಟ್ಟರ ಅರವಟಿಗೆ ಶಿಥಿಲವಾಗಿತ್ತು. ಜೀರ್ಣೋದ್ಧಾರಗೊಳಿಸಲು ಸರ್ಕಾರದ ವತಿಯಿಂದ ₹25 ಲಕ್ಷ ಅನುದಾನ ನೀಡಲಾಗಿದೆ. ನೇಕಾರರು ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಲು, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು. ನೇಕಾರ ವೃತ್ತಿ ಇಂದು ಲಾಭದಾಯಕವಾಗಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪ್ರೇರೇಪಣೆ ನೀಡಬೇಕು ಎಂದರು.
‘ರಂಗನಾಥ ಸ್ವಾಮಿ ದೇಗುಲದ ಸುತ್ತ ಇರುವ ಇತರೆ 13 ಸಮುದಾಯಗಳಿಗೆ ತಲಾ ₹25 ಲಕ್ಷದಿಂದ ₹55 ಲಕ್ಷದ ವರೆಗೆ ಅನುದಾನ ಕೊಡಿಸಿದ್ದೇನೆ. ಗೊಲ್ಲ ಮತ್ತು ಮಡಿವಾಳ ಸಮುದಾಯದವರು ಮಾತ್ರ ಅನುದಾನ ಪಡೆಯಲು ಮುಂದೆ ಬಂದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರಾ ಹಿಂದುಳಿದ 70 ಸಮುದಾಯದವರ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ನಿವೇಶನಗಳನ್ನು ನೀಡಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಮಂಜುನಾಥ ಮಾತನಾಡಿ, ‘ಕುರುಹಿನ ಶೆಟ್ಟಿ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡುತ್ತೇನೆ. ಕ್ಷೀಣಿಸುತ್ತಿರುವ ನೇಕಾರಿಕೆಗೆ ಪ್ರೋತ್ಸಾಹ ನೀಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಳಿಗೆ ಸಮಾಜದ ನಿಯೋಗ ಕೊಂಡೊಯ್ಯಲಾಗುವುದು. ಅರವಟಿಗೆ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡುವೆ’ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡ ಎ.ಎಚ್.ಬಸವರಾಜು ಮಾತನಾಡಿ, ‘ಹಿಂದುಳಿದ ವರ್ಗಗಳ ಯುವಕರು ಸಮಾಜದ ನಾನಾ ಸ್ತರಗಳಲ್ಲಿ ಗುರುತಿಸಿಕೊಂಡು ಮುಂದೆ ಬರಬೇಕು. ಒಬಿಸಿ ಸಮುದಾಯಗಳು ಮತ ಹಾಕಿ ಮನೆಯಲ್ಲಿ ಕುಳಿತರೆ ಸಮುದಾಯಗಳ ಪ್ರಗತಿ ಅಸಾಧ್ಯ. ಎಲ್ಲ ರಂಗದಲ್ಲೂ ನಾವೂ ಗುರುತಿಸಿಕೊಳ್ಳಬೇಕು. ಅಧಿಕಾರ ಕಿತ್ತುಕೊಳ್ಳುವುದು ಇಂದಿನ ಅಗತ್ಯವಾಗಿದೆ. ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೆ ಇಂದಿಗೂ ಮೂಲ ಸವಲತ್ತುಗಳು ಸಿಕ್ಕಿಲ್ಲ’ ಎಂದರು.
ಹುಬ್ಬಳ್ಳಿ ಮಠದ ಶಂಕರ ಶಿವಾಚಾರ್ಯ ಸ್ವಾಮಿ, ಡಾ.ಆರೂಢ ಭಾರತಿ ಸ್ವಾಮಿ , ರಾಜ್ಯ ಕುರುಹಿನ ಶೆಟ್ಟರ ಸಮಾಜದ ಅಧ್ಯಕ್ಷ ಈಶ್ವರಪ್ಪಭೈರಪ್ಪ, ಮಹಾನಗರ ಪಾಲಿಕೆ ಸದಸ್ಯೆ ರೂಪಾಲಿಂಗೇಶ್ವರ್, ಪುರಸಭೆ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಎಂ.ಎನ್.ಮಂಜುನಾಥ, ಪದ್ಮಾಬೋಗೇಶ್, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಎ.ಹನುಮಂತಯ್ಯ, ಗೌರವಾಧ್ಯಕ್ಷ ಎನ್.ಎಸ್.ಬಸವರಾಜು, ನಾಗರಾಜಪ್ಪ ಮಾತನಾಡಿದರು.
ಸಮಾಜಸೇವಾ ಕಾರ್ಯಕರ್ತ ಬಿ.ಸದಾಶಿವಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಕಾವ್ಯಶ್ರೀ, ಮದ್ದೂರು ತಹಶೀಲ್ದಾರ್ ಎಂ.ವಿ.ರೂಪ ಉಪನ್ಯಾಸಕರಾದ ಎನ್.ಎಸ್.ಮಂಜುನಾಥ್, ಚಂದನ್, ಪಿ.ಶಿವರಾಜು ಅವರನ್ನು ಸನ್ಮಾನಿಸಲಾಯಿತು.
ಅರವಟಿಗೆ ಜೀರ್ಣೋದ್ಧಾರ ಸಮಿತಿ ಟ್ರಸ್ಟಿನ ಅಧ್ಯಕ್ಷ ಟಿ.ಗಂಗರಾಜು, ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ಪುಟ್ಟರಾಜು, ನಿರ್ದೇಶಕರಾದ ಚಂದ್ರಶೇಖರ್, ಪುರುಷೋತ್ತಮ್, ಲಕ್ಷ್ಮೀಕಾಂತ್, ರೇಣುಕಪ್ಪ, ಎಂ.ಆರ್.ಗಂಗರಾಜು, ಎಂ.ಡಿ.ನಟರಾಜು, ಎಂ.ಸಿ.ವಿಜಯ್ ಕುಮಾರ್, ಮುಖಂಡರಾದ ವೇಣುಗೋಪಾಲ್, ಕದಂಬ ಕೃಷ್ಣ, ದಯಾನಂದ್, ಆರ್.ನಾಗೇಶ್ , ರೇಖಾ ಗಿರೀಶ್ ಮತ್ತು ಸಿದ್ದಾರೂಢ ಭಕ್ತಮಂಡಳಿ ಟ್ರಸ್ಟ್, ನಿರ್ವಾಣಿ ಭಗವತಿ ಮತ್ತು ಅಣ್ಣಮ್ಮ ದೇವಿ ಆರಾಧನಾ ಸಮಿತಿ, ನೀಲಕಂಠೇಶ್ವರ ಎಜುಕೇಷನ್ ಟ್ರಸ್ಟ್, ನಿರ್ವಾಣಿಭಗವತಿ ಮಹಿಳಾ ಮಂಡಳಿ, ವಿನಾಯಕ ಸ್ವಾಮಿ ಭಕ್ತಮಂಡಳಿ, ಜೋಗಪ್ಪ ವ್ಯಾಯಾಮ ಶಾಲೆ ಸಂಘಗಳ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.