ಮಾಗಡಿ: ಪಟ್ಟಣದ ಪುರಸಭೆ ಹಳೆ ಕಚೇರಿ ಇದ್ದ ಜಾಗದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ 19 ವರ್ಷಗಳ ಹಿಂದೆ ಎಚ್.ಎಂ.ಕೃಷ್ಣಮೂರ್ತಿ ನಿರ್ಮಿಸಿರುವ ಕೆಂಪೇಗೌಡರ ಪುತ್ಥಳಿಯ ಸುತ್ತಲಿನ ಜಾಗದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕೆಂಪೇಗೌಡ ಉದ್ಯಾನವನ ನಿರ್ಮಿಸಲಾಗುವುದು ಎಂದು ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ ತಿಳಿಸಿದರು.
ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಭಾನುವಾರ ನಡೆದ ಕೆಂಪೇಗೌಡರ 512ನೇ ಜಯಂತ್ಯುತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಧರ್ಮಪ್ರಭು ಕೆಂಪೇಗೌಡರ ವಂಶಜರು, ಸರ್ವ ಸಮುದಾಯದವರನ್ನು ತನ್ನ ಕರುಳ ಬಳ್ಳಿಗಳಂತೆ ಪೋಷಣೆ ಮಾಡಿದ್ದರು. ಗುಡಿಗೋಪುರ, ಕೋಟೆ ಕೊತ್ತಲ, ಕೆರೆಕಟ್ಟೆ ಕಲ್ಯಾಣಿ, ಅರವಟಿಕೆ ಗಳನ್ನು ನಿರ್ಮಿಸಿ ಜನೋಪಯೋಗಿ ಸೇವೆಗೆ ಮನ್ನಣೆ ನೀಡಿದ್ದರು. ಕೆಂಪೇಗೌಡರ ಮಾನವೀಯ ಆದರ್ಶಗಳು ಜನಮಾನಸದಿಂದ ಮಾಸಿಹೋಗದಂತೆ ಮುಂದಿನ ಪೀಳಿಗೆಗೆ ರಕ್ಷಿಸಿ ಉಳಿಸುವ ಅಗತ್ಯವಿದೆ. ಲೇಔಟ್ಗಳಲ್ಲಿನ ಸಿಸಿ ನಿವೇಶನಗಳಲ್ಲಿ ಸಸಿನೆಟ್ಟು ಉದ್ಯಾನವನ ಬೆಳೆಸಲು ತೀರ್ಮಾನಿಸಿದ್ದೇವೆ. ಕೆಂಪೇಗೌಡರ ಜನೋಪಯೋಗಿ ಸೇವಾ ಕೈಂಕರ್ಯ ಮುಂದುವರೆಸುವುದಾಗಿ ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಶಶಿಧರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಂಧೀಪ್ ರೆಡ್ಡಿ, ಬಿಡದಿ ಬಿಜೆಪಿ ಘಟಕದ ಉಪಾಧ್ಯಕ್ಷ ಶರತ್.ಎನ್,ಕಾರ್ಯಕರ್ತರಾದ ಆನಂದ್, ಗೋಪಾಲಕೃಷ್ಣ, ನಾಗೇಂದ್ರ, ಚಂದ್ರಕಾಂತ್, ಕುಂಚಿಟಿಗರ ಸಂಘದ ಮುಖಂಡ ಜುಟ್ಟನಹಳ್ಳಿ ಜಯಕುಮಾರ್ ಇದ್ದರು. ಅಗಲಕೋಟೆ ಅರ್ಚಕ ಅಂಜನ್ ಶಾಸ್ತ್ರೋಕ್ತವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.