ರಾಮನಗರ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಗುರುವಾರ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದೇ ದಿನ ₹ 52 ಸಾವಿರ ದಂಡ ಸಂಗ್ರಹಿಸಿದರು.
ನಗರಸಭೆ ಪೌರಾಯುಕ್ತ ನಂದಕುಮಾರ್ ನೇತೃತ್ವದ ತಂಡವು ಪೊಲೀಸರ ಸಹಯೋಗದೊಂದಿಗೆ ನಗರದ ವಿವಿಧ ಸೂಪರ್ ಮಾರ್ಕೆಟ್, ಬಾರ್ ಮತ್ತು ರೆಸ್ಟೋರೆಂಟ್, ಆಭರಣ ಮಾರಾಟ ಮಳಿಗೆಗಳು, ಮೊಬೈಲ್ ಮಾರಾಟ ಮಳಿಗೆಗಳು ಮೊದಲಾದ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಈ ಸಂದರ್ಭ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು. ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡದ ಮಾಲೀಕರಿಗೂ ದಂಡ ಬಿದ್ದಿತು. ಜೊತೆಗೆ, ನಿಷೇಧಿತ ಪ್ಲಾಸ್ಟಿಕ್ ಮಾರುತ್ತಿದ್ದ ಮತ್ತು ಬಳಸುತ್ತಿದ್ದ ವರ್ತಕರಿಗೂ ದಂಡ ಹಾಕಲಾಯಿತು.
‘ನಗರ ವ್ಯಾಪ್ತಿಯಲ್ಲಿ ದಿನೇ ದಿನೇ ಕೋವಿಡ್ ಸೋಂಕು ಹೆಚ್ಚಳ ಆಗುತ್ತಿದೆ. ಆದಾಗ್ಯೂ ಕೆಲವರು ಮಾಸ್ಕ್ ಬಳಸದೇ ಓಡಾಡುವ ಮೂಲಕ ಎಚ್ಚರ ತಪ್ಪುತ್ತಿದ್ದಾರೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಾಳಿ ನಡೆಸಲಾಯಿತು. ಈ ಸಂದರ್ಭ ಕೋವಿಡ್ ನಿಯಮ ಪಾಲನೆ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳಲಾಯಿತು’ ಎಂದು ನಂದಕುಮಾರ್ ಮಾಹಿತಿ ನೀಡಿದರು.
‘ಮುಂದೆ ಈ ದಾಳಿ ನಿರಂತರವಾಗಿರಲಿದ್ದು, ನಿಯಮ ಪಾಲನೆ ಮಾಡದವರ ವಿರುದ್ಧ ದಂಡದ ಜೊತೆಗೆ ನ್ಯಾಯಾಲಯದ ಸೂಚನೆಯಂತೆ ಪ್ರಕರಣವನ್ನೂ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.