ADVERTISEMENT

ಸಂವಿಧಾನ ಧಿಕ್ಕರಿಸುವವರಿಗೆ ಬುದ್ಧಿ ಕಲಿಸಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 5:55 IST
Last Updated 2 ಜನವರಿ 2018, 5:55 IST

ಮಾಗಡಿ: ಸಂವಿಧಾನದ ಆಶಯಗಳನ್ನು ಧಿಕ್ಕರಿಸಲು ಹೊರಟಿರುವ ರಾಜಕೀಯ ಪಕ್ಷಗಳ ಮುಖಂಡರಿಗೆ ಬುದ್ದಿ ಕಲಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರೊ.ವಿಶ್ವನಾಥ್‌ ತಿಳಿಸಿದರು.

ಬಿಎಸ್‌ಪಿ ವತಿಯಿಂದ ನಡೆದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. ಬಹುಜನರಿಗೆ ಸಂವಿಧಾನದತ್ತ ಸವಲತ್ತುಗಳನ್ನು ಕೊಡದೆ ಎಲ್ಲೆಡೆ ವಂಚಿಸಲಾಗುತ್ತಿದೆ. ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂದು ತಿಳಿಸಿದರು.

ಜೀತಪದ್ಧತಿ, ದಲಿತ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವೈವಿಧ್ಯಮಯ ಬದುಕಿನ ಬಗ್ಗೆ ಇನ್ನಿಲ್ಲದ ಟೀಕೆಗಳು ಎದುರಾಗುತ್ತಿದ್ದರೂ, ಗಮನಿಸದ ರಾಜಕಾರಣಿಗಳು ಮತ ಸೆಳೆಯಲು ಅಮಾಯಕರನ್ನು ಬಲಿ ತೆಗೆದುಕೊಳ್ಳುವುದು ಮುಂದುವರೆದಿದೆ ಎಂದು ಆರೋಪಿಸಿದರು.

ADVERTISEMENT

ಮುಗ್ಧ ಮತದಾರರಲ್ಲಿ ಸೌಹಾರ್ದತೆ, ಸಮಾನತೆ, ಶ್ರಮ ಜೀವನದ ಕುರುಹುಗಳ ಬಗ್ಗೆ ತಿಳಿಸಿಕೊಡುವುದು ಬಹುಮುಖ್ಯವಾಗಿದೆ ಎಂದರು. ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್‌, ತಾಲ್ಲೂಕು ಘಟಕದ ಅಧ್ಯಕ್ಷ ಮರಿಸೋಮನಹಳ್ಳಿ ನಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿ ಇರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರನ್ನು ಒಂದುಗೂಡಿಸಲಾಗುವುದು ಎಂದರು.

ಬಿಎಸ್‌ಪಿ ಘಟಕದ ಜಿಲ್ಲಾ ಕಾರ್ಯದರ್ಶಿ ಅಂದಾನಪ್ಪ, ಉಪಾಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷ ತಿಮ್ಮಯ್ಯ ಮಾತನಾಡಿದರು. ಮಹಿಳಾ ಘಟಕದ ಲಕ್ಷ್ಮಮ್ಮ, ಬಿ.ವಿ.ರಮೇಶ್‌, ಬಿಎಸ್‌ಪಿ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.