ರಾಮನಗರ: ಗ್ರಾಮೀಣ ಸಂಸ್ಕೃತಿಯ ಮೂಲಬೇರಾಗಿರುವ ಜನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹೇಳಿದರು.
ಇಲ್ಲಿನ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ಆಯೋಜಿಸಿದ್ದ ಜನಪರ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಜನಪದ ಸೊಗಡು ಉಳಿಸಿ ಬೆಳಸುವಲ್ಲಿ ಸರ್ಕಾರಗಳು ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಅಸಕ್ತಿ ವಹಿಸಬೇಕು. ಇದು ಕಾಟಾಚಾರಕ್ಕಾಗಿ ಮಾಡುವಂತಾಗದೇ ಕಲಾವಿದರ ಬದುಕು ಕಟ್ಟಿಕೊಳ್ಳಲು ದಾರಿಯಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಸ್ಕೃತಿ ಉಳಿಸುವ ವಾತಾವರಣ ನಿರ್ಮಿಸಲು ಮುಂದಾಗಿದೆ. ದೇಸಿ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ವಾದ್ಯ, ಕಲೆಗಳು ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕಾಳಯ್ಯ ಮಾತನಾಡಿದರು. ಉತ್ಸವದಲ್ಲಿ ಸೋಬಾನೆ ಪದ, ತತ್ವಪದ, ರಂಗಗೀತೆ, ಹೋರಾಟ ಗೀತೆಗಳು, ಜನಪದ ಗೀತಗಾಯನ, ಜನಪದ ಕಲಾ ತಂಡಗಳ ಪ್ರದರ್ಶನಗಳು ಮನಸೂರೆಗೊಂಡವು.
ಸೋಬಾನೆ ಗಾಯಕಿ ಮಾಯಮ್ಮ ಉತ್ಸವಕ್ಕೆ ಚಾಲನೆ ನೀಡಿದರು. ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್. ದೇವರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಗೌರವ ಕಾರ್ಯದರ್ಶಿ ಜಿ.ಟಿ. ಕೃಷ್ಣಪ್ಪ, ಸಾಮಾಜಿಕ ಹೋರಾಟಗಾರ ಪಿ.ಜೆ. ಗೋವಿಂದರಾಜು, ಗುರುಮಲ್ಲಯ್ಯ, ರಾಜೇಶ್, ವೆಂಕಟೇಶ್, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟಿನ ಕಾರ್ಯದರ್ಶಿ ಎಂ. ಬೈರೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.