ADVERTISEMENT

ತಾಲ್ಲೂಕಿನಲ್ಲಿ ಶೇ 73.69 ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 9:22 IST
Last Updated 19 ಏಪ್ರಿಲ್ 2019, 9:22 IST
ಮಾಗಡಿಯ ಮತಗಟ್ಟೆಯಲ್ಲಿ ಹಿರಿಯ ವಕೀಲ ಚಕ್ರಬಸವಯ್ಯ ಅವರನ್ನು ಸ್ವೀಪ್‌ ಸಮಿತಿಯ ಆಟೊದಲ್ಲಿ ಕರೆ ತಂದು ಮತದಾನ ಮಾಡಿಸಿತು
ಮಾಗಡಿಯ ಮತಗಟ್ಟೆಯಲ್ಲಿ ಹಿರಿಯ ವಕೀಲ ಚಕ್ರಬಸವಯ್ಯ ಅವರನ್ನು ಸ್ವೀಪ್‌ ಸಮಿತಿಯ ಆಟೊದಲ್ಲಿ ಕರೆ ತಂದು ಮತದಾನ ಮಾಡಿಸಿತು   

ಮಾಗಡಿ: ತಾಲ್ಲೂಕಿನಲ್ಲಿ ಶೇ73.69 ರಷ್ಟು ಶಾಂತಿಯುತ ಮತದಾನ ನಡೆಯಿತು ಎಂದು ಚುನಾವಣಾಧಿಕಾರಿ ಸೂರಜ್‌ ತಿಳಿಸಿದರು.

ಕುದೂರು ಹೋಬಳಿ ಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟ ಕಾರಣ ಅರ್ಧ ಗಂಟೆ ಮತದಾನಕ್ಕೆ ಅಡಚಣೆ ಆಯಿತು. ಮತ್ತೊಂದು ಇವಿಎಂ ತರಿಸಿಕೊಂಡು ಮತದಾನ ಮುಂದುವರಿಸಲಾಯಿತು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಪತ್ನಿ ರಾಧಾ ಅವರೊಂದಿಗೆ ಹುಲಿಕಟ್ಟೆ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ADVERTISEMENT

ಕುದೂರು ಹೋಬಳಿ ಹುಲಿಕಲ್‌ ಗ್ರಾಮದ 12ನೇ ಮತಗಟ್ಟೆಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮಧ್ಯಾಹ್ನ 3.30ಕ್ಕೆ ಸಾಕು ಪುತ್ರ ಉಮೇಶ್‌ ಜತೆ ಮತದಾನ ಮಾಡಿದರು.

ಕೃಷಿಕ ಸಮಾಜದ ನವದೆಹಲಿ ಪ್ರತಿನಿಧಿ ಸತೀಶ್‌ ಬೆಳಗವಾಡಿ ಮತಗಟ್ಟೆಯಲ್ಲಿ, ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ ಅಗಲಕೋಟೆ ಮತಗಟ್ಟೆಯಲ್ಲಿ, ಹಿರಿಯ ನಾಗರಿಕ ಕೆ.ಬಿ.ವಿಜಯಗುಪ್ತ ಕುದೂರಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಪುರಸಭೆಯಲ್ಲಿ ಮಹಿಳೆಯರಿಗಾಗಿ ಸಖಿ ಮತಗಟ್ಟೆ ತೆರೆಯಲಾಗಿತ್ತು. ಆದರೆ, ಏಜೆಂಟರು ಮಾತ್ರ ಪುರುಷರು ಇದ್ದರು. ವಿವಿಧ ಗ್ರಾಮಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲು ಮಾಡಲಾಗಿತ್ತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗೆ ಇಳಿವಯಸ್ಸಿನ ಹಿರಿಯ ವಕೀಲ ಚಕ್ರಬಸವಯ್ಯ ಅವರನ್ನು ಸ್ವೀಪ್‌ ಸಮಿತಿ ಆಟೊದಲ್ಲಿ ಕರೆದು ತಂದು ಮತದಾನ ಮಾಡಿಸಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ಏಳಿಗೆಹಳ್ಳಿ ಕಾಲೊನಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.