ADVERTISEMENT

‘ಸಂಘಟನೆಯಿಂದ ಸಬಲರಾಗಲು ಸಾಧ್ಯ’

ರೇಷ್ಮೆ ಕೃಷಿಯಲ್ಲಿ ಯಂತ್ರೋಪಕರಣ, ಆಧುನಿಕ ವಿಧಾನ ಅಳವಡಿಕೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 13:11 IST
Last Updated 17 ಆಗಸ್ಟ್ 2019, 13:11 IST
ಕನಕಪುರದಲ್ಲಿ ರೇಷ್ಮೆ ರೈತ ಉತ್ಪಾದಕರ ಕಂಪನಿಯನ್ನು ಪ್ರಾರಂಭಿಸಲಾಯಿತು
ಕನಕಪುರದಲ್ಲಿ ರೇಷ್ಮೆ ರೈತ ಉತ್ಪಾದಕರ ಕಂಪನಿಯನ್ನು ಪ್ರಾರಂಭಿಸಲಾಯಿತು   

ಕನಕಪುರ: ‘ರೇಷ್ಮೆ ಕೃಷಿ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರ್ಕಾರದಿಂದ ₹ 10 ಲಕ್ಷ ಸಹಾಯ ಧನ ಸಿಗುತ್ತಿದೆ. ರೈತರು ಇದರ ಸದ್ಬಳಕೆ ಮಾಡಿಕೊಂಡು, ಸಹಕಾರ ಸಂಘಗಳನ್ನು ಪ್ರಾರಂಭಿಸಬೇಕು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮುತ್ತುರಾಜು ಹೇಳಿದರು.

ನಗರದಲ್ಲಿ ‘ಕನಕಪುರ ರೇಷ್ಮೆ ರೈತ ಉತ್ಪಾದಕರ ಕಂಪನಿ’ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ರೈತರು ಒಕ್ಕೂಟ ರಚಿಸಿಕೊಂಡು, ಯಂತ್ರೋಪಕರಣ ಬಳಸಿ ರೇಷ್ಮೆ ಕೃಷಿ ಕೈಗೊಳ್ಳಬೇಕು. ಇದರಿಂದ ಹೆಚ್ಚಿನ ಲಾಭ ಇದೆ. ಹಾಲು ಉತ್ಪಾದಕರ ಸಹಕಾರ ಸಂಘದಂತೆ, ರೇಷ್ಮೆ ಕೃಷಿ ಸಹಕಾರ ಸಂಘ ರಚಿಸಿ, ಇಲಾಖೆ ಮಾರ್ಗದರ್ಶನದಂತೆ ಕೆಲಸ ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು. ಸರ್ಕಾರವೂ ಸಹಾಯ ಮಾಡುತ್ತದೆ’ ಎಂದು ಹೇಳಿದರು.

ADVERTISEMENT

ಕನಕಪುರ ರೇಷ್ಮೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಡಿ.ಕೆ.ರಾಮಕೃಷ್ಣ ಮಾತನಾಡಿ, ‘ಮದ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಅನುಕೂಲವಾಗುವಂತೆ ಮಾಡಲು, 2 ಸಾವಿರ ರೈತರು ಸೇರಿ ಸಂಘ ಸ್ಥಾಪಿಸಿದ್ದು, ರೇಷ್ಮೆ ಕೃಷಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು. ಯಂತ್ರೋಪಕರಣಗಳಿಗೆ ಮೊದಲ ಆದ್ಯತೆ ನೀಡಿದ್ದು, ಸಂಘದಲ್ಲಿ ಸದಸ್ಯರಾದವರಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುವುದು. ಗುಣಮಟ್ಟದ ಬೆಳೆ ಬೆಳೆಯಲು ರೈತರನ್ನು ಬೆಂಬಲಿಸಲಾಗುವುದು’ ಎಂದು ಹೇಳಿದರು.

ಕನಕಪುರ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಮಲ್ಲೇಶ್, ಮೈಸೂರಿನ ವಿಜ್ಞಾನಿ ಡಾ.ಡಿ.ಗುರುಸ್ವಾಮಿ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಚ್‌.ಸಿ ಸುರೇಶ್, ರೇಷ್ಮೆ ಪ್ರದರ್ಶಕರಾದ ಡಿ.ಕುಮಾರ ಸ್ವಾಮಿ, ವಿ.ಪುಟ್ಟಮಾದಯ್ಯ, ಶಕುಂತಲ, ಗೂಡಿನ ಮಾರುಕಟ್ಟೆಯ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಆನಂದ, ಸಂಘದ ನಿರ್ದೇಶಕರಾದ ಎಚ್.ಕೆ.ವೆಂಕಟೇಶ್, ಸತೀಶ್, ಬಾಲು.ಕೆ, ಮಮತ ಚಿಕ್ಕರಾಜು, ಹರೀಶ್, ರವಿನಾಯ್ಕ, ಸತೀಶ್.ಬಿ, ಕೃಷ್ಣಪ್ಪ, ಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.