ಕನಕಪುರ: ಪಟ್ಟಣದ ಹೊರವಲಯದ ಗಡಸಹಳ್ಳಿ–ಶಿವನಹಳ್ಳಿ ನಡುವಣ ಬೈಪಾಸ್ ರಸ್ತೆಯಲ್ಲಿ ಮಧ್ಯೆ ಗುರುವಾರ ಕಲ್ಲಿನ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಕುಂದಾಪುರ ಮೂಲದ ಪ್ರದೀಪ್ (40) ಎಂಬುವರು ಮೃತಪಟ್ಟಿದ್ದಾರೆ. ಪ್ರದೀಪ್ ಅವರು ಪುಷ್ಪಾಂಜಲಿ ಪೆಟ್ರೋಲ್ ಬಂಕ್ ಬಳಿ ನಂದಿನಿ ಹಾಲಿನ ಉತ್ಪನ್ನಗಳ ಅಂಗಡಿ ಇಟ್ಟುಕೊಂಡಿದ್ದರು.
ಪ್ರದೀಪ್ ಅವರು ಬೈಪಾಸ್ ರಸ್ತೆಯ ಮಹಾರಾಜರ ಕಟ್ಟೆ ಸಮೀಪ ಟೀ ಅಂಗಡಿ ತೆರೆಯಲು ಬೆಳಿಗ್ಗೆ ಪೂಜೆ ನೆರವೇರಿಸಿದ್ದರು. ಸಂಜೆ ಸ್ನೇಹಿತನಿಗೆ ಅಂಗಡಿ ತೋರಿಸಿ ಆತನನ್ನು ಅಲ್ಲಿಯೇ ಬಿಟ್ಟು ಶಿವನಹಳ್ಳಿ ಕಡೆಗೆ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದರು. ಮಳವಳ್ಳಿ ಕಡೆಯಿಂದ ವೇಗವಾಗಿ ಬಂದ ಕಲ್ಲಿನ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಏರ್ಬ್ಯಾಗ್ ತೆರೆದುಕೊಂಡರೂ, ಪ್ರದೀಪ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕನಕಪುರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.