ADVERTISEMENT

ರೈತರ ಹೆಸರಿಗೇ ಖಾತೆ: ಶಾಸಕ ಎ.ಮಂಜುನಾಥ್

ಕುದೂರು: ಖಾತಾ ಆಂದೋಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 2:39 IST
Last Updated 11 ಸೆಪ್ಟೆಂಬರ್ 2020, 2:39 IST
ಕುದೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಖಾತಾ ಅಂದೋಲನದಲ್ಲಿ ಫಲಾನುಭವಿಗಳಿಗೆ ಶಾಸಕ ಎ.ಮಂಜುನಾಥ್ ದಾಖಲಾತಿ ವಿತರಿಸಿದರು
ಕುದೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಖಾತಾ ಅಂದೋಲನದಲ್ಲಿ ಫಲಾನುಭವಿಗಳಿಗೆ ಶಾಸಕ ಎ.ಮಂಜುನಾಥ್ ದಾಖಲಾತಿ ವಿತರಿಸಿದರು   

ಕುದೂರು (ಮಾಗಡಿ): ‘ರೈತರಿಗೆ ಅವರು ಇರುವಲ್ಲಿಯೇ ಖಾತೆಗಳನ್ನು ಮಾಡಿಕೊಡಲಾಗುತ್ತಿದೆ. ಯಾರೂ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗದೇ ನೇರ ಸರ್ಕಾರಿ ಸಿಬ್ಬಂದಿಯನ್ನು ಸಂಪರ್ಕಿಸಬೇಕು’ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

ಕುದೂರು ಗ್ರಾ.ಪಂ. ಸಭಾಂಗಣದಲ್ಲಿ ಬುಧವಾರ ಖಾತಾ ಅಂದೋಲನ ಅಂಗವಾಗಿ 100 ಮಂದಿಗೆ ಖಾತೆ ವಿತರಿಸಿ ಅವರು ಮಾತನಾಡಿದರು. ಕಂಚುಗಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಂದ ರೈತರ ಅಸ್ತಿಯನ್ನು ಅಳತೆ, ಸ್ಕೆಚ್ ಮಾಡಿಸಿ ರೈತರಿಗೆ ಖಾತೆ ಮಾಡಿಸಿಕೊಡಲು ಪ್ರಾಯೋಗಿಕವಾಗಿ ಕಾರ್ಯ ನಡೆದಿದೆ. ಇದೇ ಮಾದರಿ ತಾಲ್ಲೂಕಿನಾದ್ಯಂತ ಅನುಸರಿಸಲು ಆದೇಶ ನೀಡಲಾಗಿದೆ. ಪ್ರತಿ ಗ್ರಾಮಗಳಿಗೆ ಪಿಡಿಒ, ಕಾರ್ಯದರ್ಶಿ, ರೆವಿನ್ಯೂ ಅಧಿಕಾರಿ ಮತ್ತು ಸರ್ವೇ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ರೈತರು ತಮ್ಮ ಅಸ್ತಿಯನ್ನು ಖಾತಾ ಮಾಡಿಸಿಕೊಳ್ಳಲು ಸಂಬಂಧಪಟ್ಟ ದಾಖಲೆ, 800 ಹಣ ಪಾವತಿಸಿದರೆ ಸ್ಥಳದಲ್ಲೇ ಖಾತೆ ಮಾಡಿಕೊಡಲಿದ್ದಾರೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಠಾಣಾಗಳನ್ನು ವಿಸ್ತರಣೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಗ್ರಾಮ ಪಂಚಾಯಿತಿ ಪಿಡಿಒಗಳು ರೈತರ ಜಮೀನುಗಳ ದಾಖಲೆ ಪಡೆದು ಫಾರಂ ನಂ 11ಬಿ ನೀಡಬೇಕು. ಸುಖಾಸುಮ್ಮನೆ ಜನರನ್ನು ಸತಾಯಿಸಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ತಾ.ಪಂ. ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ತಾಲ್ಲೂಕಿನ ಕಾಲೊನಿ, ನವಗ್ರಾಮಗಳನ್ನು ನಿರ್ಮಿಸಿ ಕಡು ಬಡವರಿಗೆ ನಿವೇಶನ ನೀಡಲಾಗುತ್ತಿದೆ. ಫಲಾನುಭವಿಗಳ ಹೆಸರಿಗೆ ಇಲ್ಲಿಯವರೆಗೂ ಖಾತೆ ಮಾಡಿ
ಕೊಟ್ಟಿಲ್ಲ. ಈ ಸಂಬಂಧ ಶಾಸಕರು ಹಂತ,ಹಂತವಾಗಿ ಖಾತೆ ಮಾಡಿಕೊಡಲು ಮುಂದಾಗಬೇಕು ಎಂದರು. ಖಾತಾ ಆಂದೋಲನಾ ವಿನೂತನ ಕಾರ್ಯಕ್ರಮವಾಗಿದ್ದು, ಇದು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ADVERTISEMENT

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಟಿ. ಪ್ರದೀಪ್‌, ಮುಖಂಡರಾದ ಕೆ.ಕೃಷ್ಣಮೂರ್ತಿ, ತಾ.ಪಂ. ಸದಸ್ಯರಾದ ನರಸಿಂಹಮೂರ್ತಿ, ದಿವ್ಯಾ ರಾಣಿ ಚಂದ್ರಶೇಖರ್, ಕುದೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ಪಿಡಿಒ ಬಿ.ಎನ್.ಲೋಕೇಶ್ , ಕಾರ್ಯದರ್ಶಿ ವೆಂಕಟೇಶ್, ಆಡಳಿತಾಧಿಕಾರಿ ಎನ್.ಜಿ.ನಾಗರಾಜು, ಪುರುಷೋತ್ತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.