ಕನಕಪುರ: ಶಿವನಹಳ್ಳಿ ಮೆಗಾ ಡೈರಿಯಲ್ಲಿ ಆ್ಯಸಿಡ್ನಿಂದ ಗಾಯಗೊಂಡಿದ್ದ ಮೋಹನ್ (20) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಾವನ್ನಪ್ಪಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಸೂಕ್ತ ಪರಿಹಾರನೀಡಬೇಕೆಂದು ಸಿಬ್ಬಂದಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಹೋದ್ಯೋಗಿ ಸಾವಿನಿಂದ ಕಂಗಾಲಾದ ಸಿಬ್ಬಂದಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದೇ ಘಟನೆಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿ ಪ್ರಾಣ ರಕ್ಷಣೆಗೆ ಭದ್ರತೆ ನೀಡಿದರೆ ಮಾತ್ರ ಕೆಲಸ ಮಾಡುವುದಾಗಿ ಪಟ್ಟುಹಿಡಿದರು. ಅಧಿಕಾರಿಗಳ ದೌರ್ಜನ್ಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಿವನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಕೆ.ವೀರಪ್ಪ ಮಾತನಾಡಿ, ಯಾವುದೇ ಕಾರ್ಮಿಕರಿಗೂ ತೊಂದರೆ ಆಗಬಾರದು. ಈಗಾಗಲೇ ಒಕ್ಕೂಟದ ಆಡಳಿತ ಮಂಡಳಿ ಮೃತರ ಪೋಷಕರೊಂದಿಗೆ ಮಾತನಾಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ ಎಂದರು.
ಇದಕ್ಕೆ ಒಪ್ಪಿದ ಕಾರ್ಮಿಕರು ಅಂತಿಮವಾಗಿ ಪ್ರತಿಭಟನೆ ಕೈಬಿಟ್ಟರು. ಬೆಂಗಳೂರು ಹಾಲು ಒಕ್ಕೂಟ ಶಿವನಹಳ್ಳಿ ಬಳಿ ನಿರ್ಮಿಸಿರುವ ಮೆಗಾ ಡೇರಿಯಲ್ಲಿ ಒಟ್ಟು 300ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತಪಟ್ಟಿರುವ ಮೋಹನ್ 6ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದರು.
ಮೃತರ ಅಂತ್ಯಸಂಸ್ಕಾರ ನಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೆರವೇರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.