ADVERTISEMENT

ಅನುದಾನ ಹಂಚಿಕೆ: ಸದಸ್ಯರ ವಾಕ್ಸಮರ

ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ: ಶಾಸಕ ಸಿ.ಎಂ. ಲಿಂಗಪ್ಪ ಮಧ್ಯಪ್ರವೇಶದಿಂದ ಸುಖಾಂತ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 8:49 IST
Last Updated 17 ಏಪ್ರಿಲ್ 2021, 8:49 IST
ಬಿಡದಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ
ಬಿಡದಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ   

ಬಿಡದಿ: ಬಿಡದಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಅನುದಾನ ಹಂಚಿಕೆ ಮಾಡಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರಶ್ನಿಸಿದ ವಿಪಕ್ಷ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಸಾಮಾನ್ಯಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯದೆ ಕೇವಲ 9 ವಾರ್ಡ್‌ಗಳಿಗೆ ₹40 ಲಕ್ಷ ಅನುದಾನ ಹಂಚಿಕೆ ಮಾಡಿರುವ ವಿಚಾರವನ್ನು ಸದಸ್ಯ ಸಿ‌. ಉಮೇಶ್ ಪ್ರಶ್ನಿಸಿದರು.

‘ಕಳೆದ ಜನವರಿಯ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಚರ್ಚಿಸಿದ ವಿಚಾರದಲ್ಲಿ ಈ ವಿಷಯವೇ ಪ್ರಸ್ತಾಪವಾಗಿಲ್ಲ. ಆದರೂ ಅನುದಾನ ಹಂಚಿಕೆಗೆ ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಸಭಾ ನಡುವಳಿಯಲ್ಲಿ ನಿರ್ಣಯ ದಾಖಲಾಗಿದೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

ಅಧ್ಯಕ್ಷೆ ಸರಸ್ವತಿ ರಮೇಶ್ ಮತ್ತು ಉಪಾಧ್ಯಕ್ಷ ಲೋಕೇಶ್ ಹಿಂದಿನ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಅನುಮೋದನೆ ಪಡೆಯಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

ಉಮೇಶ್ ಅವರು ಅಧಿಕಾರಿಯನ್ನು ಪ್ರಶ್ನಿಸಿದಾಗ ‘ಇಲ್ಲ’ ಎಂದು ಉತ್ತರಿಸಿದರು. ಇದಕ್ಕೆ ಕೋಪಗೊಂಡ ಲೋಕೇಶ್ ಶೀಘ್ರಲಿಪಿಗಾರರಿಗೆ ‘ನೀನು ಬರೆಯೋ ಕೆಲಸ ಅಷ್ಟೇ ಮಾಡು, ನಿಮ್ಮ ಚೀಫ್ ಆಫೀಸರ್ ಉತ್ತರಿಸುತ್ತಾರೆ’ ಎಂದು ಗದರಿಸಿದರು.

ಆಕ್ಷೇಪ ವ್ಯಕ್ತಪಡಿಸಿದ ಉಮೇಶ್, ‘ಅಧಿಕಾರಿಗಳು ಗುಲಾಮರಲ್ಲ ಸೌಜನ್ಯದಿಂದ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಯಾಯಿತು. ಸದಸ್ಯರೆಲ್ಲ ಸಮಾಧಾನಪಡಿಸಿದ ಮಹಿಪತಿ ಹಾಗೂ ರಮೇಶ್ ಕುಮಾರ್, ‘ಯಾರೇ ಆಗಿರಲಿ ತಪ್ಪು ಮಾಡಿದ್ದರೆ ಅದನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆರೋಗ್ಯಕರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಒಬ್ಬರನ್ನೊಬ್ಬರು ತೇಜೋವಧೆ ಮಾಡುವುದು ಬೇಡ’ ಎಂದು ಮನವಿ ಮಾಡಿಕೊಂಡರು.

ಲೋಕೇಶ್ ಅವರು ಸದಸ್ಯ ಟಿ. ಕುಮಾರ್ ಸಲಹೆಯಂತೆ ಕಾರ್ಯಸೂಚಿಯನ್ನು ವಿಷಯವಾರು ಚರ್ಚೆ ನಡೆಯಲಿ ಎಂದು ಹೇಳಿದರು. ಇದರಿಂದ ಕುಪಿತಗೊಂಡ ಉಮೇಶ್ ಕಾಂಗ್ರೆಸ್ ಸದಸ್ಯರೊಂದಿಗೆ ಸಭಾಧ್ಯಕ್ಷರ ಪೀಠದ ಎದುರಿನ ಬಾವಿಗೆ ಇಳಿದು ಪ್ರತಿಭಟಿಸಿದರು.

ವಿಧಾನಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಬರುತ್ತಿದ್ದಂತೆಯೇ ಸಭೆಯಲ್ಲಿ ಮೌನ ಆವರಿಸಿತು. ಲಿಂಗಪ್ಪ ಮಾತನಾಡಿ, ಅನುದಾನ ಹಂಚಿಕೆಯಾಗಲಿ ಬೇರೆ ವಿಷಯಗಳಲ್ಲಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ದೊರಕಿದೆ ಎಂದು ಸಭೆ ಮುಕ್ತಾಯವಾದ ನಂತರ ಸಭಾ ನಡಾವಳಿ ಪುಸ್ತಕದಲ್ಲಿ ದಾಖಲಿಸುವುದು ಕ್ರಮಬದ್ಧವಾದ ನಡವಳಿಕೆ. ಅವರ ಬರೆದು ಪ್ರಸ್ತುತ ಸಭೆಯಲ್ಲಿ ಅನುದಾನ ಹಂಚಿಕೆ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು.

2020–21ನೇ ಸಾಲಿನಲ್ಲಿ ಬಾಕಿ ಉಳಿದಿದ್ದ ₹46 ಲಕ್ಷ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ರಮೇಶ್
ಹೇಳಿದಾಗ, ಸದಸ್ಯರು ಇಷ್ಟು ದಿನಗಳವರೆಗೂ ಅನುದಾನವನ್ನು ಏಕೆ ಮಾಡಿರಲಿಲ್ಲ 9ವಾರ್ಡುಗಳಿಗೆ ಮಾತ್ರ ಏಕೆಂದರೆ ಮಾಡಿದ್ದೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ 9 ವಾರ್ಡುಗಳಿಗೆ ಹಂಚಿಕೆ ಮಾಡಿದ ಅನುದಾನ ರದ್ದುಪಡಿಸಿ ಎಲ್ಲ ವಾರ್ಡ್‌ಗೂ ಸಮನಾಗಿ ಹಂಚಿಕೆ ಮಾಡಲು ಸಭೆ ಸರ್ವಾನುಮತದಿಂದ ಅನುಮೋದಿಸಿತು.

ಇಟ್ಟಮಡು ಸ್ಮಶಾನ ಗಡಿ ಗುರುತಿಸುವುದು ಹಾಗೂ ಕಾನೂನು ನಿಯಮಗಳನ್ನು ಉಲ್ಲಂಘಿಸಿ ನಾಲ್ಕೈದು ಅಂತಸ್ತಿನ ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಿರುವ ಕುರಿತು ಬಿ.ಎಂ.ಆರ್.ಡಿ ಆಯುಕ್ತರನ್ನು ಭೇಟಿಯಾಗಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.