ADVERTISEMENT

ಗೃಹರಕ್ಷಕರ ಸೇವೆಗೆ ಶ್ಲಾಘನೆ

ಪಾರದರ್ಶಕವಾಗಿ ಸಿಬ್ಬಂದಿ ನೇಮಿಸಲು ಎಸ್‌.ಪಿ ಗಿರೀಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 4:17 IST
Last Updated 25 ಫೆಬ್ರುವರಿ 2021, 4:17 IST
ಚನ್ನಪಟ್ಟಣದಲ್ಲಿ ನಡೆದ ಗೃಹರಕ್ಷಕ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ಎಸ್‌ಪಿ ಗಿರೀಶ್ ಚಾಲನೆ ನೀಡಿದರು
ಚನ್ನಪಟ್ಟಣದಲ್ಲಿ ನಡೆದ ಗೃಹರಕ್ಷಕ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ಎಸ್‌ಪಿ ಗಿರೀಶ್ ಚಾಲನೆ ನೀಡಿದರು   

ಚನ್ನಪಟ್ಟಣ: ಸಾರ್ವಜನಿಕರ ಪ್ರಾಣ, ಆಸ್ತಿ, ಸಂಪತ್ತನ್ನು ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿರುವ ಗೃಹರಕ್ಷಕ ಸಿಬ್ಬಂದಿಯ ಸೇವಾ ಮನೋಭಾವ ಪ್ರಶಂಸನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅಭಿಪ್ರಾಯಪಟ್ಟರು.

ಪಟ್ಟಣದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗೃಹರಕ್ಷಕ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸರ ಜೊತೆಯಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮೆರೆಯುವ ಗೃಹರಕ್ಷಕ ದಳದ ಅವಶ್ಯಕತೆ ಪೊಲೀಸ್ ಇಲಾಖೆಗೆ ಅಗಾಧವಾಗಿದೆ ಎಂದರು.

ಗೃಹರಕ್ಷಕ ದಳದ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು. ಪೊಲೀಸರಂತೆಯೇ ಪ್ರತಿಯೊಂದು ಮಾನದಂಡಗಳ ಮುಖಾಂತರ ಆಯ್ಕೆ ನಡೆಯಬೇಕು. ಆಯ್ಕೆಯಾದ ಸಿಬ್ಬಂದಿ ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ, ಭ್ರಷ್ಟಾಚಾರವನ್ನು ಹತ್ತಿಕ್ಕಲು ಪೊಲೀಸರ ಜೊತೆ ಕೈ ಜೋಡಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ನಿರಂಜನ್ ಮಾತನಾಡಿ, ಗೃಹರಕ್ಷಕ ದಳದ ಸಿಬ್ಬಂದಿಯ ನೇಮಕ ಈ ಬಾರಿ ಚನ್ನಪಟ್ಟಣದಲ್ಲಿ ನಡೆಯುತ್ತಿದೆ. ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಆಯ್ಕೆ ನಡೆಸಲಾಗುತ್ತಿದೆ ಎಂದು
ತಿಳಿಸಿದರು.

ಗೃಹರಕ್ಷಕ ದಳದ ಜಿಲ್ಲಾ ಬೋಧಕ ಗಾಯಕ್ ವಾಡ್, ಅಧೀಕ್ಷಕ ಆರ್.ಕೆ. ರವಿ, ಕಂಪನಿ ಕಮಾಂಡರ್‌ಗಳಾದ ಕನಕಪುರದ ವಿಜಯ್ ಕುಮಾರ್, ಚನ್ನಪಟ್ಟಣದ ವೆಂಕಟೇಶ್, ಬಿಡದಿಯ ವೆಂಕಟೇಶ್, ಅಭಿಲಾಷ್, ಶಿವನಂಜಯ್ಯ, ಹನುಮಂತು, ಅಕ್ಕೂರು ವೆಂಕಟೇಶ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.