ಮಾಗಡಿ: ‘ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಆರ್ಯವೈಶ್ಯ ಯುವಕರಿಗೆ ರಾಜಕೀಯದಲ್ಲಿ ಸ್ಥಾನಮಾನ ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ’ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.
ಆರ್ಯವೈಶ್ಯ ಮಂಡಳಿ ವತಿಯಿಂದ ನಡೆಯುತ್ತಿರುವ ವಾಸವಿ ಜಯಂತಿ ಸಮಾರೋಪದಲ್ಲಿಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಪಟ್ಟಣದ ವೈಶ್ಯ ಸಮುದಾಯದವರಿಗೆ ಅಂದಿನ ಸಚಿವ ಎಚ್.ಎಂ.ರೇವಣ್ಣ ಮತ್ತು ನಾನು ರಾಜಕೀಯ ಅವಕಾಶ ನೀಡಿದ್ದೇವೆ. ಆರ್ಯವೈಶ್ಯರು ಬಳಸುವ ರುದ್ರಭೂಮಿಯಲ್ಲಿ ಅನುಕೂಲ ಕಲ್ಪಿಸಿಲು ₹ 25 ಲಕ್ಷ ನೀಡಿದ್ದೇನೆ. ಟಿ.ಎ.ರಂಗಯ್ಯ ಬಡಾವಣೆಯಲ್ಲಿ ಪಿರಮಿಡ್ ಧ್ಯಾನಕೇಂದ್ರ ಕಟ್ಟಲು ನಿವೇಶನ ನೀಡಿದ್ದೇನೆ. ಇನ್ನು ಒಂದು ತಿಂಗಳಲ್ಲಿ ಮುಖ್ಯರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಿ ದುರಸ್ತಿ ಪಡಿಸಿ, ಡಾಂಬರು ಹಾಕಿಸಲಾಗುವುದು’ ಎಂದರು.
‘ಒಳಚರಂಡಿ ಮತ್ತು 24X7 ಕುಡಿಯುವ ನೀರು ಯೋಜನೆಗಳು ವಿಫಲ ಯೋಜನೆಗಳಾಗಿವೆ. ಜನತೆಗೆ ಸೂಕ್ತ ಅನುಕೂಲವಾಗಿಲ್ಲದ ಕಾರಣ ಎತ್ತಿನಮನೆ ಗುಲಗಂಜೀಗುಡ್ಡಕ್ಕೆ ಕಾವೇರಿ ನದಿ ನೀರು ಹರಿಸಿ, ಅಲ್ಲಿಂದ ಪಟ್ಟಣದ ಗೌರಮ್ಮನಕೆರೆಗೆ ಕಾವೇರಿ ನೀರು ತುಂಬಿಸಲಾಗುವುದು’ ಎಂದರು.
‘ಪಟ್ಟಣದ ಜನತೆಗೆ ಕಾವೇರಿ ನದಿ ನೀರು ಕುಡಿಯಲು ಒದಗಿಸುವ ಯೋಜನೆಗೆ ಟೆಂಡರ್ ಕರೆಯಲಾಗುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆರ್ಯವೈಶ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ನಾಡಿನ ಸಮಸ್ತ ವರ್ತಕರ ಸಮುದಾಯಕ್ಕೆ ಅನುಕೂಲವಾಗಲಿದೆ. ಈಗಾಗಲೇ ಗ್ರಂಥಾಲಯ ಮತ್ತು ಆಧುನಿಕ ಶೌಚಾಲಯ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ನೈಸ್ ರಸ್ತೆಯಿಂದ 4 ಪಥದ ರಸ್ತೆ ಕಾಮಗಾರಿ ಆರಂಭಿಸಲಾಗುವುದು’ ಎಂದರು.
ವರ್ತಕ ಎಸ್.ಸುರೇಂದ್ರನಾಥ್, ಸಂಗೀತಶಿಕ್ಷಕಿ ಮೀರಾಶಿವಕುಮಾರ್ ಅವರನ್ನು ಶಾಸಕರು ಸನ್ಮಾನಿಸಿದರು.
ಕವಯಿತ್ರಿ ವಿಜಯಾ ನಾಗೇಶ್ ಮತ್ತು ಸಂಗೀತ ವಿಧುಷಿ ವಸಂತಲಕ್ಷ್ಮೀ, ಲೇಖಕಿ ರೂಪಾ, ಸಂಸ್ಕೃತಿ ಚಿಂತಕರಾದ ಎಸ್.ಸುನಿಲ್, ಎಸ್.ದೀಪು ಕವನ ವಾಚಿಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಸ್.ಜಿ.ರಮೇಶ್ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಕೆ.ಬಿ.ಬಾಲು, ಎಂ.ಎನ್.ಮಂಜುನಾಥ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಗೀತಾ ನಾಗೇಶ್, ಮಂಡಳಿ ಕಾರ್ಯದರ್ಶಿ ಎಸ್.ನಾಗರಾಜು, ಉಪಾಧ್ಯಕ್ಷ ಬಿ.ಎನ್.ಸತೀಶ್, ಖಜಾಂಚಿ ಎಸ್.ವೇಣುಗೋಪಾಲ್ ಗುಪ್ತ ವೇದಿಕೆಯಲ್ಲಿದ್ದರು.
ಪ್ರಧಾನ ಅರ್ಚಕ ಎಚ್.ಪಿ.ರಾಮಚಂದ್ರಗುಪ್ತ, ಅರ್ಚಕರಾದ ಎಚ್.ಪಿ.ಶಶಿಕಾಂತ್, ಎಚ್.ಆರ್.ನಾಗೇಶ್ ಹೋಮ ನಡೆಸಿದರು. ವಾಸವಿ ಮಾತೆಗೆ ಸುವರ್ಣ ಅಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.