ADVERTISEMENT

ರಾಮನಗರ | 'ಅರ್ಥಪೂರ್ಣ ಅಂಬೇಡ್ಕರ್ ಜಯಂತಿಗೆ ತೀರ್ಮಾನ'

ನಗರಸಭೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 7:46 IST
Last Updated 8 ಏಪ್ರಿಲ್ 2025, 7:46 IST
ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ ಕುರಿತು ರಾಮನಗರ ನಗರಸಭೆ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ ಹಾಗೂ ಸದಸ್ಯರು ಇದ್ದಾರೆ
ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ ಕುರಿತು ರಾಮನಗರ ನಗರಸಭೆ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ ಹಾಗೂ ಸದಸ್ಯರು ಇದ್ದಾರೆ   

ರಾಮನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ನಗರಸಭೆ ವತಿಯಿಂದ ಹಬ್ಬದ ರೀತಿಯಲ್ಲಿ ಇದೇ ತಿಂಗಳು ಅರ್ಥಪೂರ್ಣವಾಗಿ ಆಚರಿಸಲು, ನಗರಸಭೆಯಲ್ಲಿ ನಡೆದ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತ ಸಂಘಟನೆಗಳ ಮುಖಂಡರ ಜೊತೆಗಿನ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಶಶಿ, ‘ವಿಶ್ವಕಂಡ ಮಾನವತಾವಾದಿ ಅಂಬೇಡ್ಕರ್ ಅವರ ವಿಚಾರಗಳನ್ನು ಜನರಿಗೆ ತಿಳಿಸುವ ಸಲುವಾಗಿ ನಗರಸಭೆಯ ಮೂಲಕವೇ ಜಯಂತಿ ಆಚರಣೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ 2025-26ನೇ ಸಾಲಿನ ನಗರಸಭೆ ಬಜೆಟ್‌ನಲ್ಲಿ ₹5 ಲಕ್ಷ ಮೀಸಲಿಡಲಾಗಿದೆ. ಅದಕ್ಕಾಗಿ ದಲಿತ ಮುಖಂಡರೊಂದಿಗೆ ಸಭೆ ನಡೆಸಿ ಸಲಹೆ–ಸೂಚನೆ ಸ್ವೀಕರಿಸಲಾಗಿದೆ’ ಎಂದರು.

‘ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ನಾಡಿನ ಪ್ರಸಿದ್ಧ ಸಾಹಿತಿಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಎಲ್ಲರನ್ನೂ ಒಳಗೊಂಡ ಕಾರ್ಯಕ್ರಮವನ್ನು ರೂಪಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮರಸ್ವಾಮಿ, ‘ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ. ಅಂತಹ ಮೇರು ವ್ಯಕ್ತಿತ್ವದ ಮಹಾನ್ ವ್ಯಕ್ತಿಯ ಜಯಂತಿ ಆಚರಣೆಯನ್ನು ನಗರಸಭೆ ವತಿಯಿಂದಲೇ ಆಚರಿಸಲು ಮುಂದಾಗಿರುವುದು ಶ್ಲಾಘನೀಯ. ಅದಕ್ಕೆ ಒಕ್ಕೂಟ ಎಲ್ಲಾ ರೀತಿಯ ಸಹಕಾರ ನೀಡಲಿದೆ’ ಎಂದರು.

ಸಮತಾ ಸೈನಿಕ ದಳ ಕಾರ್ಯಾಧ್ಯಕ್ಷ ಜಿ. ಗೋವಿಂದಯ್ಯ ‘ಕಾರ್ಯಕ್ರಮದ ವೇದಿಕೆಗೆ ದೇಶ ಕಂಡ ಪ್ರಸಿದ್ದ ಕವಿಯಾದ ಜಿಲ್ಲೆಯ ಸುಪುತ್ರ ಸಿದ್ದಲಿಂಗಯ್ಯ ಅವರ ಹೆಸರಿನ್ನಿಡಬೇಕು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಆಯೇಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಪಾಷ, ಆಯುಕ್ತ ಡಾ. ಜಯಣ್ಣ, ಸದಸ್ಯರಾದ ಬಿ.ಸಿ. ಪಾರ್ವತಮ್ಮ, ಶಿವಸ್ವಾಮಿ, ದೌಲತ್ ಷರೀಪ್, ಅಜ್ಮತ್‌ಉಲ್ಲಾ ಖಾನ್, ನರಸಿಂಹ, ಸಮದ್, ಗಿರಿಜಮ್ಮ, ಜಯಲಕ್ಷ್ಮಮ್ಮ, ಬೈರೇಗೌಡ, ಮುಖಂಡರಾದ ರೈಡ್ ನಾಗರಾಜು, ಡಾ. ಕೂಡ್ಲೂರು ರವಿ, ಗವಿಯಪ್ಪ, ಶೇಖರ್, ಶಿವಲಿಂಗಯ್ಯ, ಸರಸ್ವತಮ್ಮ, ಸಿದ್ದರಾಮು, ಯೋಗಾನಂದ, ಗೋಪಿನಂದನ್, ಲೋಕೇಶ್, ವೆಂಕಟೇಶ್, ಹನುಮಂತು, ಪಾಪಣ್ಣ, ಗುಡ್ಡೆ ವೆಂಕಟೇಶ್, ಹರೀಶ್ ಬಾಲು, ಕುಂಬಾಪುರ ಬಾಬು, ಶ್ರೀನಿವಾಸ್, ಬಿವಿಎಸ್ ಹರೀಶ್ ಹಾಗೂ ಇತರರು ಇದ್ದರು.

ಕ್ರೀಡಾಂಗಣಕ್ಕೆ ಅಂಬೇಡ್ಕರ್‌ ಹೆಸರಿಡಲು ಮನವಿ ಅಂಬೇಡ್ಕರ್ ಅವರ ಬದುಕನ್ನು ಕಟ್ಟಿಕೊಡುವ ಚಿತ್ರಗಳ ಪ್ರದರ್ಶನ ಆಯೋಜಿಸಬೇಕು. ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಕರೆತರುವಾಗ ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಲು ವ್ಯವಸ್ಥೆ ಮಾಡಬೇಕು. ನೂರು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಬೇಕು. ಐಎಎಸ್ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು. ನಗರಸಭಾ ಕಚೇರಿ ರಸ್ತೆಗೆ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಅಂಬೇಡ್ಕರ್ ಹೆಸರಿಡಬೇಕು ಎಂಬ ಅಭಿಪ್ರಾಯಗಳನ್ನು ಮುಖಂಡರಾದ ಡಾ. ರವಿಕುಮಾರ್ ಶಿವಶಂಕರ್ ಶಿವಲಿಂಗಯ್ಯ ಆರ್. ನಾಗರಾಜು ನಿಖಿಲ್ ಸಜ್ಜೆನಿಂಗಯ್ಯ ಸೇರಿದಂತೆ ಹಲವರು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.