ADVERTISEMENT

ಕೊಳ್ಳಿಗನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 13:17 IST
Last Updated 14 ಫೆಬ್ರುವರಿ 2020, 13:17 IST
ಕೊಳ್ಳಿಗನಹಳ್ಳಿ ವಿಎಸ್‌ಎಸ್‌ಎನ್‌ಗೆ ಆಯ್ಕೆಯಾದವರನ್ನು ಅಭಿನಂದಿಸಲಾಯಿತು
ಕೊಳ್ಳಿಗನಹಳ್ಳಿ ವಿಎಸ್‌ಎಸ್‌ಎನ್‌ಗೆ ಆಯ್ಕೆಯಾದವರನ್ನು ಅಭಿನಂದಿಸಲಾಯಿತು   

ಹಾರೋಹಳ್ಳಿ (ಕನಕಪುರ): ಇಲ್ಲಿನ ಕೊಳ್ಳಿಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್‌ ಬೆಂಬಲಿತ ಕೆ.ಎನ್.‌ಲಕ್ಷ್ಮಣ್‌ ಅಧ್ಯಕ್ಷರಾಗಿ, ಶಿವರಾಜು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 2, ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ ಚುನಾವಣಾಧಿಕಾರಿ ಕೆ.ಟಿ.ಉಮೇಶ್‌ ಶುಕ್ರವಾರ ಚುನಾವಣೆ ನಡೆಸಿದರು.

ಕಾಂಗ್ರೆಸ್‌ ಪಕ್ಷ ಬೆಂಬಲಿತರಿಗೆ ಸಂಖ್ಯಾ ಬಲ ಇಲ್ಲದ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೆ ಕಣದಿಂದ ಹಿಂದೆ ಸರಿದಿದ್ದರು. ಜೆಡಿಎಸ್‌ ಬೆಂಬಲಿತರು 8 ಮಂದಿ ಇದ್ದುದರಿಂದ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್‌.ಲಕ್ಷ್ಮಣ್‌, ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಜು ನಾಮಪತ್ರ ಸಲ್ಲಿಸಿದ್ದರು.

ಎರಡೂ ಸ್ಥಾನಗಳಿಗೂ ಒಂದೊಂದೆ ನಾಮಪತ್ರ ಬಂದಿದ್ದರಿಂದ ಚುನಾವಣಾಧಿಕಾರಿ ಎರಡೂ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆಮಾಡಿ ಘೋಷಣೆ ಮಾಡಿದರು. ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎಸ್‌.ಸಿ.ಉಮೇಶ್‌ ಸಹಾಯಕರಾಗಿದ್ದರು. ಸಂಘದ 11 ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್‌.ರಾಮು, ಜೆಡಿಎಸ್‌ ಮುಖಂಡರಾದ ಡಿ.ಎಸ್‌.ಭುಜಂಗಯ್ಯ, ಎಂ.ಮಲ್ಲಪ್ಪ, ಗೌತಮ್‌.ಎಂ.ಗೌಡ, ಸೋಮಶೇಖರ್‌, ಹುಲಿಸಿದ್ದೇಗೌಡನದೊಡ್ಡಿ ಸಿದ್ದಪ್ಪ, ಗುಳ್ಳಟ್ಟಿ ಸೋಮಣ್ಣ, ಮಹದೇವು, ದಾಸಪ್ಪ, ಸೊಂಟೇನಹಳ್ಳಿ ದಿನೇಶ್‌, ರಾಜು, ಕೆ.ಪಿ.ನಾಗರಾಜು, ರಾಮೂರ್ತಿ, ಕೆಂಚಪ್ಪ, ಕೆ.ಪಿ.ರಾಜೇಶ್‌, ಶಿವನಂಜಪ್ಪ, ಕೆ.ಆರ್‌.ಶಿವಣ್ಣ, ಕೆ.ಬಿ.ಕುಮಾರ್‌, ನಾರಾಯಣಪುರ ಪ್ರಕಾಶ್‌ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂಧಿಸಿದರು.

‘ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಿಂದಿನ ಅವಧಿಯಲ್ಲೂ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಜನತೆ 2ನೇ ಅವಧಿಗೆ ಮತ್ತೆ ನನಗೆ ಅವಕಾಶ ನೀಡಿದ್ದಾರೆ. ಸಹಕಾರ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಜನತೆಗೆ ಎಷ್ಟು ಕೆಲಸ ಮಾಡಿಕೊಡಬಹುದೊ ಅದನ್ನು ಪ್ರಾಮಾಣಿಕವಾಗಿ ಮಾಡಿಕೊಡುತ್ತೇನೆ. ಅವಕಾಶ ಕಲ್ಪಿಸಿದ ಎಲ್ಲರಿಗೂ ಅಭಿನಂಧನೆ’ ಎಂದು ಕೆ.ಎನ್.‌ಲಕ್ಷ್ಮಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.