ADVERTISEMENT

ಪ್ರಕರಣ ದಾಖಲಿಸದ ಪೊಲೀಸರು: ಎಸ್ಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 14:00 IST
Last Updated 30 ಮಾರ್ಚ್ 2020, 14:00 IST

ರಾಮನಗರ: ತೋಟದಲ್ಲಿ ಕಳವು ಮಾಡಿದ ಆರೋಪಿಗಳ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದ ಬಿಡದಿ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು. ತಮ್ಮ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಡದಿ ಹೋಬಳಿಯ ಕಾಕರಾಮನಹಳ್ಳಿ ನಿವಾಸಿ ಕೆ.ಬಿ. ರಾಜಣ್ಣ ಎಂಬುವರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದಾರೆ.

‘ಇದೇ ತಿಂಗಳ 24ರಂದು ಬೆಳಿಗ್ಗೆ ಗ್ರಾಮದಲ್ಲಿರುವ ತಮ್ಮ ತೆಂಗಿನ ತೋಟದಲ್ಲಿ ಸಿದ್ದಾಬೋವಿ ಪಾಳ್ಯದ ನಾಲ್ವರು ಆರೋಪಿಗಳು ತೆಂಗಿನಕಾಯಿ ಕಿತ್ತು ಅಕ್ರಮವಾಗಿ ಸಾಗಿಸುತ್ತಿದ್ದರು. ಇದನ್ನು ನನ್ನ ಮಗ ವಿಜಯ್‌ಕುಮಾರ್ ಗಮನಿಸಿದ್ದು, ಅವರನ್ನು ಬೆನ್ನತ್ತಿದ ಕಾರಣ ಆರೋಪಿಗಳು ಪರಾರಿಯಾಗಿದ್ದು, ಬೈಕ್‌ ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಒಬ್ಬ ಆರೋಪಿ ಮಾತ್ರ ಸಿಕ್ಕಿದ್ದ. ನಂತರದಲ್ಲಿ ಆರೋಪಿಯ ತಂದೆ-ತಾಯಿ ನಮ್ಮ ಮೇಲೆಯೇ ಹಲ್ಲೆ ನಡೆಸಿ ಆತನನ್ನು ಕರೆದೊಯ್ದರು. ಈ ಬಗ್ಗೆ ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಬ್ಬರು ಕಾನ್‌ಸ್ಟೆಬಲ್‌ಗಳ ಬಂದು ಬೈಕ್‌ ಹಾಗೂ ಆರೋಪಿಯನ್ನು ಠಾಣೆಗೆ ಒಯ್ದಿದ್ದರು. ಆದರೆ, ನಾನು ಪ್ರಕರಣ ದಾಖಲಿಸಲು ಹೋದಾಗ ಅವರು ದೂರು ದಾಖಲಿಸಲಿಲ್ಲ. ಬದಲಾಗಿ ಈಗ ನಮ್ಮ ಮೇಲೆಯೇ ವಿನಾಕಾರಣ ದೂರು ದಾಖಲಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕು’ ಎಂದು ರಾಜಣ್ಣ ಎಸ್ಪಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT