ಮಾಗಡಿ: ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 12 ಜನರಿಗೆ ಕೋವಿಡ್ –19 ದೃಢಪಟ್ಟಿದೆ. ಜುಲೈ 9 ರಂದು ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳಿಸಿದ್ದ ಫಲಿತಾಂಶ ಭಾನುವಾರ ಬಂದಿದೆ. ಇನ್ನೂ 10 ದಿನಗಳ ಗಂಟಲು ದ್ರವ ಪರೀಕ್ಷೆ0 ಫಲಿತಾಂಶ ಬರಬೇಕಿದೆ.
ತಿರುಮಲೆ ಚೌಡೇಶ್ವರಿ ಬೀದಿ, ದುಡಪನಹಳ್ಳಿ, ಮಂಚನಬೆಲೆ, ಸೋಲೂರು ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರನ್ನು ಗುರುತಿಸಿ ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಆರೋಪ: ತಿರುಮಲೆ ಚೌಡೇಶ್ವರಿ ಬೀದಿಯಲ್ಲಿ ನೇಕಾರ ಕುಟುಂಬದವರೊಬ್ಬರ ಗಂಟಲು ದ್ರವ ತೆಗೆದು 10 ದಿನಗಳಾದ ಮೇಲೆ ಫಲಿತಾಂಶ ಬಂದಿದೆ. ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇನ್ನೂ ನಾಲ್ವರಿಗೆ ವಿಪರೀತ ಜ್ವರ ಬಂದಿದೆ. ಇನ್ನುಳಿದ 6 ಜನರ ಫಲಿತಾಂಶ ಬರಬೇಕಿದೆ. ಫಲಿತಾಂಶ ವಿಳಂಬದಿಂದಾಗಿ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಜಿಲ್ಲಾಡಳಿತದ ವಿಳಂಬ ನೀತಿಯಿಂದಾಗಿ ಸೋಂಕು ಜಾಸ್ತಿಯಾಗುತ್ತಿದೆ ಎಂದು ಸಂಬಂಧಿಗಳು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.