ADVERTISEMENT

ಸ್ಮಶಾನಗಳ ಅಭಿವೃದ್ಧಿಗೆ ಮುಂದಾದ ಜಿ.ಪಂ.

ನರೇಗಾ ಅಡಿ  ಕಾಮಗಾರಿ: ಸ್ಥಳೀಯರಿಗೆ ಉದ್ಯೋಗದ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 7:49 IST
Last Updated 2 ಆಗಸ್ಟ್ 2020, 7:49 IST

ರಾಮನಗರ: ಜಿಲ್ಲೆಯಲ್ಲಿ ಇರುವ 158 ಸ್ಮಶಾನಗಳಿಗೆ ಹೊಸ ರೂಪ ನೀಡಲು ಜಿಲ್ಲಾ ಪಂಚಾಯಿತಿ ಮುಂದಾಗಿದ್ದು, ಇದಕ್ಕಾಗಿ ನರೇಗಾ ಅಡಿ ಯೋಜನೆ ರೂಪಿಸುತ್ತಿದೆ.

ಜಿಲ್ಲೆಯಲ್ಲಿ 127 ಗ್ರಾಮ ಪಂಚಾಯಿತಿಗಳಿವೆ. ಇಲ್ಲಿ ಎಂಟುನೂರಕ್ಕೂ ಗ್ರಾಮಗಳಿವೆ. ಆದರೆ, ಇವುಗಳಲ್ಲಿ ಕೇವಲ 158 ಗ್ರಾಮಗಳಲ್ಲಿ ಮಾತ್ರ ಸ್ಮಶಾನಗಳು ಇವೆ. ಉಳಿದೆಡೆ ಸಾರ್ವಜನಿಕ ಸ್ಥಳಗಳು, ಖರಾಬು ಜಮೀನು ಮೊದಲಾದ ಕಡೆಗಳಲ್ಲೇ ಅಂತ್ಯಸಂಸ್ಕಾರ ನೆರವೇರಿಸುತ್ತಾ ಬರಲಾಗಿದೆ. ಇರುವ ಸ್ಮಶಾನಗಳಿಗೂ ಅಗತ್ಯವಾದ ಸೌಕರ್ಯಗಳು ಇಲ್ಲ. ಕೆಲವು ಕಡೆ ರಸ್ತೆಗಳು ಇಲ್ಲದೇ ಹಳ್ಳಕೊಳ್ಳಗಳನ್ನು ದಾಟಿ ಅಂತ್ಯಕ್ರಿಯೆ ನೆರವೇರಿಸಬೇಕಾದ ಅನಿವಾರ್ಯತೆ ಇದೆ. ಅಗತ್ಯ‌ ಇರುವ ಕಡೆಗಳಲ್ಲಿ ಸ್ಮಶಾನಗಳ ನಿರ್ಮಾಣಕ್ಕೆ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ನಡುವೆಯೇ ಹಾಲಿ ಇರುವ ಸ್ಮಶಾನಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗುತ್ತಿದೆ.

ಪ್ರಾಯೋಗಿಕ ಯೋಜನೆ: ಯೋಜನೆ ಮಾದಲ ಹಂತದಲ್ಲಿ ಎರಡು ಸ್ಮಶಾನಗಳನ್ನು ಮಾದರಿಯಾಗಿ ರೂಪಿಸಲಾಗುತ್ತಿದೆ. ರಾಮನಗರ ತಾಲ್ಲೂಕಿನ ಬಿಳಗುಂಬ ಹಾಗು ಚನ್ನಪಟ್ಟಣದ ಹೊಂಗನೂರು ಗ್ರಾಮಗಳಲ್ಲಿನ ಸ್ಮಶಾನಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ADVERTISEMENT

ಏನೇನು ಕಾಮಗಾರಿ: ಸ್ಮಶಾನಗಳಲ್ಲಿನ ಭೂಮಿ ಸಮತಟ್ಟು ಪಡಿಸುವುದು, ಬೂಸ್ಟ್ ಕ್ಲಿಯರ್, ಚರಂಡಿ ನಿರ್ಮಾಣ, ತೊಟ್ಟಿ ಕಟ್ಟುವುದು, ಬರ್ನಿಂಗ್ ಶೆಡ್ಡ್‌, ಸರಾಗವಾಗಿ ನೀರು ಹರಿಯಲು ವ್ಯವಸ್ಥೆ, ಕಂಪೌಂಡ್ ನಿರ್ಮಾಣ, ಆಸನಗಳ ವ್ಯವಸ್ಥೆ, ಪಾರ್ಕ್ (ಲಾನ್) ನಿರ್ಮಾಣ...ಹೀಗೆ ಅಗತ್ಯ ಸೌಲಭ್ಯ ಕಲ್ಪಿಸಲು ಜಿ.ಪಂ. ಮುಂದಾಗಿದೆ. ಇದಲ್ಪದೇ ವಯೋವೃದ್ಧರಿಗಾಗಿ ಆಸನಗಳ ವ್ಯವಸ್ಥೆ, ಕಾಂಪೌಂಡ್, ಚರಂಡಿ ವ್ಯವಸ್ಥೆಯೊಂದಿಗೆ ಶೌಚಾಲಯಗಳ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.