ಮಾಗಡಿ: ‘ಹೇಮಾವತಿ ನದಿ ನೀರು ಹರಿಸುವ ಬಗ್ಗೆ ಅಡ್ಡಗಾಲು ಹಾಕಿರುವ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಬೆಂಬಲಿಗರು ಯಾರು ಎಂಬುದನ್ನು ಶಾಸಕ ಎ. ಮಂಜುನಾಥ್ ಸ್ಪಷ್ಟವಾಗಿ ಬಹಿರಂಗಪಡಿಸಬೇಕು’ ಎಂದು ಕಿಸಾನ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಪುರುಷೋತ್ತಮ್ ಒತ್ತಾಯಿಸಿದರು.
ಸೋಮವಾರ ಕಿಸಾನ್ ಕಾಂಗ್ರೆಸ್ ಘಟಕದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೇಮಾವತಿ ನದಿ ನೀರು ಹರಿಸುವ ಬಗ್ಗೆ ಮತ್ತು ಕೈಗಾರಿಕೆ ಸ್ಥಾಪನೆಗೆ ಬಾಲಕೃಷ್ಣ ಬೆಂಬಲಿಗರು ವಿರೋಧಿಸಿಲ್ಲ. ಈ ವಿಚಾರವಾಗಿ ಚರ್ಚಿಸಲು ಸೆ. 27ರಂದು ಪುರಸಭೆ ಕಟ್ಟಡದಲ್ಲಿ ಬಹಿರಂಗ ಸಭೆ ಏರ್ಪಡಿಸಿದ್ದೇವೆ. ಶಾಸಕರು ಈ ಚರ್ಚೆಯಲ್ಲಿ ಭಾಗವಹಿಸಿ ಸ್ಪಷ್ಟ ಉತ್ತರ ನೀಡಬೇಕು
ಎಂದರು.
ಮಾಜಿ ಶಾಸಕರಿಗೆ ನೀರಾವರಿ ಬಗ್ಗೆ ತಿಳಿವಳಿಕೆ ಇಲ್ಲ ಎಂದಿರುವ ಶಾಸಕರಿಗೂ ನೀರಾವರಿ ಬಗ್ಗೆ ತಿಳಿವಳಿಕೆ ಕಡಿಮೆ ಇದೆ. ಈ ಹಿಂದೆ ಕೈಗಾರಿಕೆ ಸ್ಥಾಪನೆ ವಿರೋಧಿಸಿ ಆ ಭಾಗದ ಜನರು ಅಂದಿನ ಶಾಸಕರಾಗಿದ್ದ ಬಾಲಕೃಷ್ಣ ಅವರ ಮನೆ ಮುಂದೆ ಧರಣಿ ನಡೆಸಿದ್ದರಿಂದ ಕೈಗಾರಿಕೆ ಸ್ಥಾಪನೆಯನ್ನು ಕೈಬಿಡಲಾಗಿತ್ತು ಎಂದು ಹೇಳಿದರು.
40 ವರ್ಷಗಳಿಂದ ಹುಲಿಕಟ್ಟೆಯವರಿಗೆ ತಾಲ್ಲೂಕಿನ ಮತದಾರರು ಅಡವಿಟ್ಟಿದ್ದರು ಎಂದು ಶಾಸಕರು ನೀಡಿರುವ ಹೇಳಿಕೆ ಮತದಾರರಿಗೆ ಮಾಡಿರುವ ಅಪಮಾನ. ಅಭಿವೃದ್ಧಿ ಮಾಡೋರಿಗೆ ಜನಮನ್ನಣೆ ದೊರೆಯುವುದು ಸಹಜ. ಶಾಸಕ ಮಂಜುನಾಥ್ ಮಾಡಿರುವ ಅಭಿವೃದ್ಧಿ ಏನು ಎಂಬುದನ್ನು ಚರ್ಚೆಯಲ್ಲಿ ತಿಳಿಸಬೇಕು. ಮಾಗಡಿ ಪಟ್ಟಣದಲ್ಲಿ ಬಾಲಕೃಷ್ಣ ಅವರ ಅಧಿಕಾರಾವಧಿಯಲ್ಲಿ ಆಗಿರುವ ಅಭಿವೃದ್ಧಿಗೆ ಈಗಿರುವ ಸರ್ಕಾರಿ ಕಟ್ಟಡಗಳೇ ಸಾಕ್ಷಿ ಎಂದರು.
ಕಿಸಾನ್ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಲಕ್ಷ್ಮೀಪತಿರಾಜು, ಪದಾಧಿಕಾರಿಗಳಾದ ನರಸಿಂಹರಾಜು, ಜಗದೀಶ್ ಮರಿಯಪ್ಪ, ಗಂಗಣ್ಣ, ಸದಾಶಿವಯ್ಯ, ಗುರುರಾಜು, ಪ್ರಭು, ನಾಗರಾಜು, ಶಿವಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.