ADVERTISEMENT

ಇಡಿ ಸಮನ್ಸ್‌: ಕಾಲಾವಕಾಶ ಕೋರಿದ ಇಕ್ಬಾಲ್ ಹುಸೇನ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 13:06 IST
Last Updated 8 ಅಕ್ಟೋಬರ್ 2020, 13:06 IST
ಇಕ್ಬಾಲ್‌ ಹುಸೇನ್‌
ಇಕ್ಬಾಲ್‌ ಹುಸೇನ್‌   

ರಾಮನಗರ: ಜಿಲ್ಲೆಯ ಕಾಂಗ್ರೆಸ್ ಮುಖಂಡ ಇಕ್ಬಾಲ್‌ ಹುಸೇನ್‌ಗೆ ಜಾರಿ ನಿರ್ದೇಶನಾಲಯವು ಮತ್ತೆ ಸಮನ್ಸ್‌ ಜಾರಿ ಮಾಡಿದ್ದು, ಇದೇ 9ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಡಿ.ಕೆ. ಶಿವಕುಮಾರ್‍ ಆಪ್ತರಾದ ಇಕ್ಬಾಲ್‌ ಈಗಾಗಲೇ ಸೆ.17 ಹಾಗೂ ಇದೇ ತಿಂಗಳ 1ರಂದು ಎರಡು ಬಾರಿ ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮೊದಲ ವಿಚಾರಣೆ ಸಂದರ್ಭ ಇ.ಡಿ. ಅಧಿಕಾರಿಗಳು ಕಳೆದ10 ವರ್ಷದಲ್ಲಿನ ಆದಾಯದ ಮೂಲ ಹಾಗೂ ಬ್ಯಾಂಕ್‌ ವಿವರ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಎರಡನೇ ವಿಚಾರಣೆ ಸಂದರ್ಭ ಅಗತ್ಯ ದಾಖಲೆಗಳನ್ನು ಅವರು ಅಧಿಕಾರಿಗಳ ಮುಂದೆ ಇಟ್ಟಿದ್ದರು. ಅದರಲ್ಲಿ ಕೆಲವು ಸ್ಪಷ್ಟನೆ ಬಯಸಿ ಮೂರನೇ ವಿಚಾರಣೆಗೆ ಸಮನ್ಸ್‌ ನೀಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍ ಕುಟುಂಬದೊಂದಿಗೆ ಇಕ್ಬಾಲ್ ಹಣಕಾಸು ವ್ಯವಹಾರ ಹೊಂದಿದ್ದಾರೆ. 2018ರ ವಿಧಾನಸಭೆ ಚುನಾವಣೆ ಸಂದರ್ಭ ಡಿಕೆಶಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಪುತ್ರಿ ಐಶ್ವರ್ಯಗೆ ಇಕ್ಬಾಲ್ ವೈಯಕ್ತಿಕವಾಗಿ ₨1.75 ಕೋಟಿ ಸಾಲ ಹಾಗೂ ಅವರು ಪಾಲುದಾರಿಕೆ ಹೊಂದಿರುವ ಎನ್‌.ಎಂ. ಗ್ರಾನೈಟ್ಸ್‌ನಿಂದ 1.25 ಕೋಟಿ ರೂಪಾಯಿಸಾಲ ನೀಡಿರುವುದಾಗಿ ಘೋಷಿಸಿದ್ದರು. ಈ ಸಂಬಂಧ ಇಡಿಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ADVERTISEMENT

ಮನವಿ: ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಇಕ್ಬಾಲ್ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇರುವ ಕಾರಣ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹೀಗಾಗಿ ವಿಚಾರಣೆಗೆ ಕಾಲಾವಕಾಶ ಕೋರಿದ್ದಾರೆ. 'ಇಡಿಅಧಿಕಾರಿಗಳಿಗೆ ಈ ಸಂಬಂಧ ಇ-ಮೇಲ್ ಮೂಲಕ ಮನವಿ ಮಾಡಿದ್ದೇನೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.